





ವಿಕಾಸ ಅರ್ಬನ್ ಬ್ಯಾಂಕಿಗೆ 72.91 ಲಕ್ಷ ರೂ ನಿವ್ವಳ ಲಾಭ: ಮುರಳಿ ಹೆಗಡೆ
ಯಲ್ಲಾಪುರ ಪಟ್ಟಣದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಕಾಸ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ 72.91 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ತಿಳಿಸಿದ್ದಾರೆ.

ಮುರಳಿ ಹೆಗಡೆ
ಅವರು ಸೋಮವಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬ್ಯಾಂಕಿನ ಪ್ರಗತಿಯನ್ನು ವಿವರಿಸಿದರು.1997ರಲ್ಲಿ ಆರಂಭವಾದ ಈ ಬ್ಯಾಂಕು ಇಂದು ಗ್ರಾಹಕರ ಸೇವಾ ದೃಷ್ಟಿಯಿಂದ ಉತ್ತಮವಾದ ಹೆಸರನ್ನು ಪಡೆದಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆದ ಆರ್ಥಿಕ ಏರಿಳಿತ, ಕಾಯ್ದೆಗಳಲ್ಲಿ ಆದ ಬದಲಾವಣೆ, ಹೊಸದಾಗಿ ಹೆಚ್ಚುತ್ತಿರುವ ಆರ್ಥಿಕ ಸಂಸ್ಥೆಗಳು, ಅವುಗಳ ಸ್ಪರ್ಧಾತ್ಮಕ ಬೆಳವಣಿಗೆಗಳ ನಡುವೆಯೂ ವಿಕಾಸ ಬ್ಯಾಂಕು ಉತ್ತಮ ಪ್ರಗತಿ ಸಾಧಿಸಿದೆ ಎಂದರು. ಬ್ಯಾಂಕು 989.76 ಲಕ್ಷ ರೂ ಶೇರು ಭಂಡವಾಳ ಹೊಂದಿದ್ದು, ಸಾಲ ವಸೂಲಾತಿ ಪ್ರಮಾಣ 92.60ರಷ್ಟಿದೆ. 1145.83 ಲಕ್ಷ ರೂ ಕಾಯ್ದಿಟ್ಟ ಹಾಗೂ ಇತರ ನಿಧಿಗಳಿವೆ, 20428.98 ಲಕ್ಷ ರೂ ಠೇವು ಇದೆ. 22988.82 ಲಕ್ಷ ರೂ ದುಡಿಯುವ ಭಂಡವಾಳ ಹೊಂದಿದೆ, ಎನ್ಪಿಎ ಪ್ರಮಾಣ 7.27ರಷ್ಟಿದೆ ಎಂದು ವಿವರ ನೀಡಿದರು.

ಬ್ಯಾಂಕಿನಿಂದ ವಿವಿಧ ಸೌಲಭ್ಯ;
ಗ್ರಾಹಕರ ಅನುಕೂಲಕ್ಕಾಗಿ ವಿಕಾಸ ಬ್ಯಾಂಕು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಕೋರ್ ಬ್ಯಾಂಕಿಂಗ್, ಆನ್ಲೈನ್ ಬ್ಯಾಂಕಿಂಗ್, ಎಟಿಎಂ, ಸಿಡಿಎಂ, ಇ-ಕಾಮರ್ಸ್, ಮೊಬೈಲ್ ಬ್ಯಾಂಕಿಂಗ್ ಮುಂತಾದ ಸೇವೆಗಳನ್ನು ನೀಡುತ್ತಿದ್ದೇವೆ. ಬ್ಯಾಂಕಿನ ಪ್ರಗತಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಇಸುತ್ತೇವೆ ಎಂದರು.
ಅಗಸ್ಟ್ 27ರಂದು ವಾರ್ಷಿಕ ಸಭೆ
ವಿಕಾಸ ಬ್ಯಾಂಕಿನ ವಾರ್ಷಿಕ ಮಹಾಸಭೆಯು ಅ.27 ಗುರುವಾರದಂದು ಮಧ್ಯಾಹ್ನ 4 ಗಂಟೆಗೆ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಲಿದೆ ಎಂದು ಮುರಳಿ ಹೆಗಡೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನರಸಿಂಹ ಭಟ್ಟ, ನಿರ್ದೇಶಕರಾದ ಡಿ.ಶಂಕರ ಭಟ್ಟ, ಸದಾನಂದ ಭಟ್ಟ, ಸುಬ್ರಾಯ ಭಾಗ್ವತ್, ಶಿವರಾಮ ಭಟ್ಟ, ರಾಜೇಂದ್ರ ಬದ್ದಿ, ಲೋಕೇಶ ಗಿಡ್ಡನ್, ವಿಜಯಶ್ರೀ ವೈದ್ಯ, ಪ್ರಿಯಾ ಗಾಂವ್ಕಾರ್, ರವಿ ಹುಳಸೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಬಿಳಗಿಕರ್ ಇದ್ದರು.


=====================













