8-11-2021. ಸೋಮವಾರ.

E-YELLAPUR.COM NEWS.
ಯಲ್ಲಾಪುರ.
ನಮ್ಮ ದೈನಂದಿನ ಬದುಕು ಆಧ್ಯಾತ್ಮಿಕ ಮಾಲ್ಯಗಳ ಅನುಸರಣೆಯತ್ತ ಮುಖವಾಗಿರಬೇಕು. ಆಧ್ಯಾತ್ಮ ಮೌಲ್ಯಗಳನ್ನು ಅನುಸರಿಸುವುದರಿಂದ ಇಹದಲ್ಲಿ ಹಾಗೂ ಪರದಲ್ಲಿ ಸುಖ-ಸೌಖ್ಯ ಸಾಧ್ಯವಿದೆ ಎಂದು ಸ್ವರ್ಣವಲ್ಲೀ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಹೇಳಿದರು.
ಪಟ್ಟಣದ ಗಾಂಧಿ ಕುಟೀರದಲ್ಲಿ ಸೋಮವಾರ ಸಂಜೆ ಸಂಕಲ್ಪ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಮನರಂಜನೆಗೆ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದೆ. ಆಧ್ಯಾತ್ಮಿಕ ಮೌಲ್ಯಗಳತ್ತ ಒಲವು ಕಡಿಮೆಯಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ದಾರಿ ತಪ್ಪುತ್ತಿರುವ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕಾಗಿದೆ.ಪ್ರವಾಸೋದ್ಯಮದಲ್ಲೂ ಸಹ ಪ್ರಾಕೃತಿಕ ಸೌಂದರ್ಯಗಳ ಜೊತೆ ಆಧ್ಯಾತಿಕ ಮಹತ್ವವನ್ನು, ಐತಿಹಾಸಿಕ ಮಹತ್ವದ ವಿಷಯಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು.

ನಮ್ಮೆಲ್ಲರ ಹೆಮ್ಮೆಯ ಕಲೆಯಾದ ಯಕ್ಷಗಾನದಲ್ಲಿ ಆಧ್ಯಾತ್ಮಿಕತೆಯ ಪ್ರತಿಪಾದನೆ ಇದೆ. ಯಕ್ಷಗಾನವು ಭಕ್ತಿ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಪೌರಾಣಿಕ ಯಕ್ಷಗಾನ ಆಖ್ಯಾನದ ಮೂಲಕ ಪ್ರೇಕ್ಷಕರಿಗೆ ದೇವರ ನಿಜ ಸ್ವರೂಪದ ಅರಿವಾಗುತ್ತದೆ. ಯಕ್ಷಗಾನದಲ್ಲಿ ಬರುವ ಪಾತ್ರಗಳು ದೇವರ ಉಪಾಸಕರಾಗಿರುವುದನ್ನು ಕಾಣುತ್ತೇವೆ. ಪಾತ್ರಧಾರಿಗಳ ವೇಷ-ಭೂಷಣಗಳು, ತಿಲಕ ಧಾರಣೆ ಮುಂತಾದವುಗಳು ಭಕ್ತಿ-ಶ್ರದ್ಧೆಯ ಸಂಕೇತಗಳಾಗಿವೆ ಎಂದರು. ಕೋವಿಡ್ ಕಾರಣದಿಂದಾಗಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರವಾದ ಹಾನಿಯಾಗಿದೆ. ಈಗ ಈ ಕ್ಷೇತ್ರವು ಸ್ವಲ್ಪ ಚೇತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಯಕ್ಷಗಾನ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಯಕ್ಷಗಾನವು ಮೊದಲಿನಂತೆ ಉಚ್ಛ್ರಾಯ ಸ್ಥಿತಿ ತಲುಪುವಂತೆ ನೋಡಿಕೊಳ್ಳಬೇಕಿದೆ. ಪಾಲಕರು ತಮ್ಮ ಮಕ್ಕಳಿಗೆ ಯಕ್ಷಗಾನ ಕಲಿಯಲು ಪ್ರೇರೇಪಿಸಬೇಕು. ಈ ಮೂಲಕ ಹೊಸ ಕಲಾವಿದರ ಸೃಷ್ಟಿಯಾಗಬೇಕು. ಆಗ ಯಕ್ಷಗಾನ ಕಲೆಯ ಬೆಳವಣಿಗೆ ಹೊಂದಲು ಸಾಧ್ಯವಿದೆ.

ಇತ್ತೀಚೆಗೆ ಯುವ ಕಲಾವಿದರು ಯಕ್ಷಗಾನ ಕ್ಷೇತ್ರದತ್ತ ಬರುತ್ತಿರುವುದು ಶ್ಲಾಘನೀಯವಾಗಿದೆ. ಕಳೆದ 35 ವರ್ಷಗಳಿಂದ ನಡೆದುಬಂದ ಸಂಕಲ್ಪ ಉತ್ಸವ ನಿರಂತರವಾಗಿ ಮುಂದುವರಿಯಲಿ. ಸಂಕಲ್ಪ ಉತ್ಸವದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಜೋಡಿಸಲಾಗಿದೆ. ಈ ಉತ್ಸವದಿಂದ ಸುಸಂಸ್ಕೃತವಾದ ಪ್ರೇಕ್ಷಕ ವರ್ಗ ತಯಾರಿ ಆಗಿದೆ ಎಂದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಫಲ ಸಮರ್ಪಣೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪದ್ಮಾ ಹೆಗಡೆ ಪ್ರಾರ್ಥಿಸಿದರು. ವೇದಿಕೆಯಲ್ಲಿ ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜೀತ ಬೆಳ್ಳೀಕೇರಿ, ಶಾರದಾಂಬಾ ದೇವಾಲಯದ ಅಧ್ಯಕ್ಷ ಡಿ.ಶಂಕರ ಭಟ್ಟ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ತಾಲೂಕಾ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ್, ಕೀರ್ತನೆಕಾರ ನಾರಾಯಣ ದಾಸ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ, ಸುಬ್ರಹ್ಮಣ್ಯ ಹೆಗಡೆ, ಮುಂತಾದವರು ಇದ್ದರು.
ಚಂದ್ರಕಲಾ ಭಟ್ಟ ನಿರ್ವಹಿಸಿದರು. ಡಾ.ರವಿ ಭಟ್ಟ ಬರಗದ್ದೆ ವಂದಿಸಿದರು.

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589/

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/JH4e982fHYEHI2R9vegqPh

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading