ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯ ಶಿರಸಿ ಶೈಕ್ಷಣಿಕ ಜಿಲ್ಲಾ ಸ್ಥಳೀಯ ಸಹಾಯಕ ಸ್ಕೌಟ್ ಆಯುಕ್ತರಾಗಿ ಶಿಕ್ಷಣ ಸಂಯೋಜಕ ಸುಧಾಕರ ನಾಯಕ ನೇಮಕವಾಗಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವದ ಸುಧಾಕರ ನಾಯಕ ಅವರಿಗೆ ಈ ಮಹತ್ವದ ಜವಾಬ್ದಾರಿ ಲಭ್ಯವಾಗಿದ್ದು, ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಇನ್ನಷ್ಟು ಅವಕಾಶ ಸಿಕ್ಕಿದಂತಾಗಿದೆ.
ಸುಧಾಕರ ನಾಯಕ
ಉದಾತ್ತ ಜೀವನ ಮೌಲ್ಯಗಳನ್ನು ಮೈಗೂಡಿಸುವ ಸಂಸ್ಥೆ
ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯು ಯುವ ಜನತೆಗಾಗಿ ಇರುವ ಶೈಕ್ಷಣಿಕ ಚಳುವಳಿಯಾಗಿದ್ದು, ಉದಾತ್ತಧ್ಯೇಯ ಮತ್ತು ಮನೋಭಾವ, ಅತ್ಯುತ್ತಮ ತತ್ವಗಳನ್ನು ಹಾಗೂ ಸೇವಾ ಮನೋಭಾವ, ಕ್ರೀಡಾಮನೋಭಾವ, ಕ್ರಿಯಾಶೀಲತೆ, ಸಚ್ಚಾರಿತ್ರ್ಯ ಜೀವನ ಕೌಶಲ್ಯ, ನಾಯಕತ್ವಗುಣ, ಉದಾತ್ತ ಜೀವನಮೌಲ್ಯಗಳನ್ನು ಮೈಗೂಡಿಸುವ ಉದ್ದೇಶವುಳ್ಳ ಸರ್ಕಾರಿ ಅನುದಾನಿತ ಸ್ವಯಂ ಸೇವಾ ಸಂಸ್ಥೆಯಾಗಿದೆ.
ಸುಧಾಕರ ನಾಯಕಗೆ ಒಲಿದ ಮಹತ್ವದ ಜವಾಬ್ದಾರಿ
ಕ್ರಿಯಾಶೀಲ ವ್ಯಕ್ತಿತ್ವದ ಸುಧಾಕರ ನಾಯಕ ಅವರು ಪ್ರಸ್ತುತ ಯಲ್ಲಾಪುರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿದ್ದಾರೆ. ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯ ನಿಯಮ, ನಿಬಂಧನೆಗೊಳಪಟ್ಟು ಪ್ರಸ್ತುತ ಸುಧಾಕರ ನಾಯಕ ಅವರನ್ನು ಶಿರಸಿ ಜಿಲ್ಲಾ ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯ ಸ್ಥಳೀಯ ಸಹಾಯಕ ಸ್ಕೌಟ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಉತ್ತಮ ಸೇವೆಸಲ್ಲಿಸಿದ ಸುಧಾಕರ ನಾಯಕ ಅವರು, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೂ ಭಾಜನರಾಗಿರುವುದನ್ನು ಸ್ಮರಿಸಬಹುದು. ಈಗ ಸುಧಾಕರ ನಾಯಕ ಅವರಿಗೆ ಸಹಾಯಕ ಸ್ಕೌಟ್ ಆಯುಕ್ತರ ಜವಾಬ್ದಾರಿ ಲಭಿಸಿದೆ.
ಸುಧಾಕರ ನಾಯಕ ಅವರಿಗೆ ಬಿಇಒ ರೇಖಾ ನಾಯ್ಕ, ಬಿ.ಆರ್.ಸಿ ಸಮನ್ವಯಾಧಿಕಾರಿ ಸಂತೋಷ ಜಿಗಳೂರು, ರಾ.ಸ.ನೌ.ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ ಮುಂತಾದವರು ಶುಭ ಹಾರೈಸಿದ್ದಾರೆ.