ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಹಲ್ಲೆಮಾಡಿ, ಜೀವಬೆದರಿಕೆ ಹಾಕಿದ ಅಪರಿಚಿತರು
ಮೂತ್ರ ವಿಸರ್ಜನೆಗೆಂದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಯಲ್ಲಾಪುರ ತಾಲೂಕಿನ ನಂದೊಳ್ಳಿ ಸಮೀಪದ ಮಾವಿನಗದ್ದೆ, ಕುಂಬ್ರಿಯ ಸಿವಿಲ್ ಗುತ್ತಿಗೆದಾರ ನಾಗಪ್ಪಾ ತಂದೆ ಗಿಡ್ಡಾ ಸಿದ್ದಿ ಎಂಬುವವರು ತನ್ನ ಕಾರಿನಲ್ಲಿ ಯಲ್ಲಾಪುರದಿಂದ ಶಿರಸಿಗೆ ಬರುತ್ತಿರುವಾಗ, ಶಿರಸಿ ತಾಲೂಕಿನ ಮಲೇನಳ್ಳಿ ಹತ್ತಿರ ವಾಂತಿ ಬಂದಂತೆ ಆಗಿದ್ದರಿಂದ, ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕಾರಿನಿಂದ ಇಳಿದು ಮೂತ್ರ ವಿಸರ್ಜನೆ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಒಂದು ಬೈಕಿನಲ್ಲಿ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು, ಕಾರಿಗೆ ಪಾರ್ಕಿಂಗ್ ಲೈಟ್ ಹಾಕಲು ಆಗಲ್ವಾ? ಎಂದವರೇ ನಾನಾ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಯಾಕೆ ಬೈಯುತ್ತೀರಿ ಎಂದು ನಾಗಪ್ಪ ಸಿದ್ದಿ ಕೇಳಿದಾಗ ಅಪರಿಚಿತರು ಹಲ್ಲೆಗೆ ಮುಂದಾಗಿದ್ದಾರೆ. ಅಪರಿಚಿತರಿಂದ ತಪ್ಪಿಸಿಕೊಂಡು ಕಾರನ್ನು ಹತ್ತಲು ಮುಂದಾದಾಗ ಅಪರಿಚಿತರು ನಾಗಪ್ಪ ಸಿದ್ದಿಯವರಿಗೆ ಏಕಾಏಕಿ ಕೈಯಿಂದ ಹಲ್ಲೆ ಮಾಡಿ, ಬಲಗಣ್ಣು, ಬಲ ಕಿವಿ, ಕುತ್ತಿಗೆಯ ಬಲಭಾಗದಲ್ಲಿ ಗಾಯಮಾಡಿ, ಜೀವ ಬೆದರಿಕೆ ಹಾಕಿದ್ದಾರೆ.
ಹಲ್ಲೆಯ ಸಂದರ್ಭದಲ್ಲಿ ನಾಗಪ್ಪ ಸಿದ್ದಿಯವರ ಕೊರಳಲ್ಲಿದ್ದ ಬಂಗಾರದ ಸ್ಫಟಿಕದ ಮಣಿಸರ ಹರಿದಿದ್ದು, ಕಿಸೆಯಲ್ಲಿದ್ದ 500 ರೂ ಹಣ ಹಾಗೂ ಕಾರಿನಲ್ಲಿದ್ದ ಆಧಾರ ಕಾರ್ಡ್ ಮುಂತಾದ ದಾಖಲೆಪತ್ರಗಳು ಬಿದ್ದು ಕಾಣೆಯಾಗಿವೆ. ಈ ಘಟನೆ ಜೂ.1ರಂದು ರಾತ್ರಿ 9 ಗಂಟೆಯ ಸಮಯದಲ್ಲಿ ನಡೆದಿದೆ ಎಂದು ನಾಗಪ್ಪ ಸಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೂ.7ರಂದು ಮಧ್ಯಾಹ್ನ ದೂರು ದಾಖಲಿಸಿದ್ದಾರೆ.