ಪ್ರವಾಸಿ ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸುರಕ್ಷತಾ ಕ್ರಮ
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯ ಪ್ರಮುಖ 8 ಕಡಲತೀರಗಳಾದ ಅಂಕೋಲಾದ ನದಿಭಾಗ ಕಡಲತೀರ, ಹೊನ್ನಗುಡಿ ಕಡಲತೀರ, ಕುಮಟಾದ ಗೋಕರ್ಣ, ಕುಡ್ಲೆ, ಓಂ, ಧಾರೇಶ್ವರ, ಹೆಡ ಬಂದರು, ಅಪ್ಸರಕೊಂಡ ಕಡಲತೀರ ಮತ್ತು ಭಟ್ಕಳದ ಮುರುಡೇಶ್ವರ ಕಡಲತೀರದಲ್ಲಿ ಒಟ್ಟು 8 ಸಂಖ್ಯೆಯ ಎಚ್ಚರಿಕೆಯ ಸೂಚನಾಫಲಕಗಳನ್ನು ಅಳವಡಿಸಲಾಗಿದ್ದು, ಮುರುಡೇಶ್ವರ ಕಡಲತೀರ, ಗೋಕರ್ಣ ಕಡಲತೀರ, ಓಂ ಕಡಲತೀರ ಮತ್ತು ಕೂಡ್ಲೆ ಕಡಲತೀರದಲ್ಲಿ ಹೊಸದಾಗಿ ವಾಚ್ ಟವರ್ ಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯ ಲೈಫ್ ಗಾರ್ಡ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಜಿಲ್ಲೆಯ ಪ್ರಮುಖ 8 ಜಲಪಾತಗಳಾದ, ಅಂಕೋಲಾದ ವಿಭೂತಿ ಜಲಪಾತ, ಶಿರಸಿಯ ಬೆಣ್ಣೆಹೊಳೆ, ಮುರೆಗಾರ, ಶಿವಗಂಗಾ, ಮತ್ತಿಗೆಟ್ಟಾ, ಸಿದ್ದಾಪುರದ ಉಂಚಳ್ಳಿ ಮತ್ತು ಬುರುಡೆ ಜಲಪಾತ ಹಾಗೂ ಯಲ್ಲಾಪುರದ ಸಾತೋಡಿ ಜಲಪಾತಗಳ ಸಮೀಪದಲ್ಲಿ ಸಮೀಪ 8 ಸಂಖ್ಯೆಯ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ಪ್ರಮುಖ 13 ಜಲಪಾತಗಳ ಬಳಿ ಸುರಕ್ಷತೆಗಾಗಿ ಸಿಬ್ಬಂದಿಗಳನ್ನು ನೇಮಿಸಲು 13 ಹೋಮ್ ಗಾರ್ಡ ಸಿಬ್ಬಂದಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಒದಗಿಸಲು ಹೋಮ್ ಗಾರ್ಡ ಇಲಾಖೆಗೆ ಪತ್ರ ಬರೆಯಲಾಗಿದ್ದು, ಕಾರವಾರ ಕಡಲ ತೀರದಲ್ಲಿ ಸ್ವಚ್ಛತೆಗಾಗಿ 6 ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಬೀಚ್ ಸ್ವಚ್ಛತಾ ಮಿಶಿನ್ ದುರಸ್ತಿ ಮಾಡಿಸಿ ಚಾಲನೆಯಲ್ಲಿ ಇಡಲಾಗಿದೆ. ಸಮುದ್ರದಲ್ಲಿ, ನದಿಗಳಲ್ಲಿ ಇಲಾಖೆಯಿಂದ ಅನುಮತಿ ನೀಡಿದ ಜಲಸಾಹಸ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಉಪ ನಿರ್ದೇಶಕರು/ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ, ಕಾರವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೋಟಾರು ವಾಹನ ಕಾಯಿದೆ ಉಲ್ಲಂಘನೆ: ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯತಿ
ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2021-22 ರ ಅವಧಿಯಲ್ಲಿ ಮೋಟಾರು ವಾಹನ ಕಾಯಿದೆ / ನಿಯಮಗಳ ಉಲ್ಲಂಘನೆ ಸಂಬಂಧ ದಾಖಲಾಗಿ, ಬಾಕಿ ಇರುವ ಡಿ.ಎಸ್.ಎ (ಇಲಾಖಾ ಶಾಸನ) ಪ್ರಕರಣಗಳ ದಂಡದ ಮೊತ್ತದಲ್ಲಿ 50% (ಶೇ. ಐವತ್ತರಷ್ಟು ಮಾತ್ರ) ರಷ್ಟು ರಿಯಾಯತಿ ನೀಡಿ ಜೂ. 21 ರಿಂದ ಜುಲೈ 10 (20 ದಿನಗಳು) ರವರೆಗೆ ಕಾಲಾವಕಾಶ ನೀಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.
ವಾಹನ ಮಾಲೀಕರುಗಳು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ. ಈ ದಂಡದ ಮೊತ್ತ ಭರಿಸಲು ಯಾವುದೇ ಆನ್ಲೈನ್ ಲಿಂಕ್ ಇರುವುದಿಲ್ಲ. ವಾಹನ ಮಾಲೀಕರು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ದಂಡದ ಮೊತ್ತವನ್ನು ಕಚೇರಿ ನಗದು ಕೌಂಟರ್ ನಲ್ಲಿ ಪಾವತಿ ಮಾಡಿ ರಶೀದಿ ಪಡೆದುಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಕಾರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೊನ್ ಬಿ ಮಿಸ್ಕಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.