ಅಕ್ರಮ ಸಾರಾಯಿ, ಗಾಂಜಾ ಮಾರಾಟ ಹತೋಟಿಗೆ ಒಂದು ತಿಂಗಳ ಗಡುವು ನೀಡಿದ ಅನಂತಮೂರ್ತಿ ಹೆಗಡೆ
ಶಿರಸಿ, ಸಿದ್ದಾಪುರ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಅಕ್ರಮವಾಗಿ ಅವ್ಯಾಹತವಾಗಿ ನಡೆಯುತ್ತಿರುವ ಸರಾಯಿ ಮಾರಾಟ ಮತ್ತು ಗಾಂಜಾ ಸೇವನೆ ವಿರೋಧಿಸಿ ಮತ್ತು ಚಟುವಟಿಕೆ ತಡೆಯುವಂತೆ ಆಗ್ರಹಿಸಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಮತ್ತು ಸಾರ್ವಜನಿಕರ ವತಿಯಿಂದ ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ನೀಡಿದರು.
ಚಾರಿಟೇಬಲ್ ಟ್ರಸ್ಟ್ ಆಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಸಣ್ಣ ಸಣ್ಣ ಊರುಗಳಲ್ಲೂ ಕೂಡ ಹೆಂಡದ ಹಾವಳಿ ಹೆಚ್ಚಾಗಿದೆ ಹೆಂಡ ಕುಡಿಯುವುದೇ ತಪ್ಪು, ಪೇಟೆಗೆ ಹೋಗಿ ಕುಡಿದರೆ ಖರ್ಚು ಹೆಚ್ಚಾಗುತ್ತದೆ ಎಂದು ಹಳ್ಳಿಯಲ್ಲೇಯೇ ಸಿಗುವ ಹೆಂಡ ಕುಡಿಯುತ್ತಾರೆ. ಈ ಸರಾಯಿ ಗುಣಮಟ್ಟದ್ದಲ್ಲ, ನಿರಂತರ ಇದರ ಸೇವನೆಯಿಂದ ದೇಹದ ಬಹು ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ, ನಿರಂತರ ಸೇವನೆಯಿಂದ ಆರೋಗ್ಯ ಹಾಳಾಗುವುದರ ಜೊತೆಗೆ ಆರ್ಥಿಕ ನಷ್ಟ ಕೂಡ ಉಂಟಾಗುತ್ತದೆ.
ಇಂತಹ ಅನಧಿಕೃತ ವ್ಯಾಪಾರಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗಾಂಜಾ ಸೇವನೆ, ಮಾರಾಟ ಹಾವಳಿ ದಂಧೆಯಾಗಿ ವಿದ್ಯಾರ್ಥಿಗಳು ಯುವ ಜನತೆಯನ್ನ ಬಲಿ ಪಡೆಯುತ್ತಿದೆ, ವಿದ್ಯಾಭ್ಯಾಸ ಮಾಡಿ ದೇಶದ ಕುಟುಂಬದ ಸಂಪತ್ತು ಆಗಬಲ್ಲ ಯುವಕರು ದುಶ್ಚಟಕ್ಕೆ ಬಲಿಯಾಗಿ ಜೀವನ ಕಳೆದುಕೊಳ್ಳುತ್ತಿದ್ದಾರೆ. ಸ್ಥಳೀಯ ಶಾಸಕರು ಇದರ ನಿಯಂತ್ರಣ ಬಗ್ಗೆ ಯಾವುದೇ ಕ್ರಮ ವಹಿಸದೆ ಇರುವುದು ದಂಧೆ ಇನ್ನಷ್ಟು ಹೆಚ್ಚುತ್ತಿದೆ, ನಾವು ಈ ಸಂದರ್ಭದಲ್ಲಿ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ.
ಈ ಅಕ್ರಮ ಸಾರಾಯಿ ಡ್ರಗ್ಸು ಗಾಂಜಾ ಇವೆಲ್ಲವನ್ನ ಇನ್ನೊಂದು ತಿಂಗಳಲ್ಲಿ ನೀವು ಹತೋಟಿಗೆ ತರಬೇಕು ಎಂಬುದಾಗಿ ಈ ಮೂಲಕ ಎಚ್ಚರಿಕೆಯನ್ನು ಕೊಡುತ್ತಿದ್ದೇನೆ ಎಂದರು.
ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ, ಪ್ರಮುಖರಾದ ಮಹಾಂತೇಶ ಹಾದಿಮನಿ, ಸುರೇಶ ನಾಯ್ಕ್, ಮಾರುತಿ ನಾಯ್ಕ್ ಹೊಸೂರ್ ಮಾತನಾಡಿದರು. ಪ್ರತಿಭಟನೆಯಲ್ಲಿ ವಿ ಎಮ್ ಭಟ್ , ಅಣ್ಣಪ್ಪ ಹಸ್ಲರ್, ಶ್ರೀಕಾಂತ್ ಬಳ್ಳಾರಿ, ಹರೀಶ್ ಪಾಲೇಕರ್, ವಿನಾಯಕ ನಾಯ್ಕ್, ಅನಸೂಯ ಹೆಗಡೆ, ಯುವರಾಜ ಗೌಡ ಸಂತೋಳ್ಳಿ,, ಮಂಜುನಾಥ ನಾಯ್ಕ್, ರಾಘವೇಂದ್ರ ನಾಯ್ಕ್, ಶಂಕರ್ ಹೆಗಡೆ, ಕೃಷ್ಣಮೂರ್ತಿ ಐಸೂರ್ ಗಣಪತಿ ಹೆಗಡೆ, ಶ್ರೀಪಾದ್ ಹೆಗಡೆ, ನಾರಾಯಣ ಹೆಗಡೆ, ಮಹೇಂದ್ರ ಭಟ್, ಜಿ ಎಸ್ ಹೆಗಡೆ, ಮಂಜುನಾಥ ಪಾಟೀಲ್, ಪ್ರದೀಪ್ ಹೆಗಡೆ, ಉಪೇಂದ್ರ ಮೇಸ್ತ, ಮತ್ತಿತರರು ಉಪಸ್ಥಿತರಿದ್ದರು. ಶಿರಸಿ ತಾಲೂಕ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಸ್ವಾಗತಿಸಿ ನಿರ್ವಹಿಸಿದರು. ರಮೇಶ ಕುಪ್ಪಳ್ಳಿ ಮನವಿ ವಾಚಿಸಿದರು.