ಯಲ್ಲಾಪುರ: ನೂತನ ತಹಶೀಲ್ದಾರರಾಗಿ ಎಂ.ಆರ್.ಕುಲಕರ್ಣಿ ಅಧಿಕಾರ ಸ್ವೀಕಾರ
ಯಲ್ಲಾಪುರ: ನೂತನ ತಹಶೀಲ್ದಾರರಾಗಿ ಎಂ.ಆರ್.ಕುಲಕರ್ಣಿ ಅಧಿಕಾರ ಸ್ವೀಕರಿಸಿದರು.
ಮೂಲತಃ ಧಾರವಾಡದವರಾದ ಎಂ.ಆರ್.ಕುಲಕರ್ಣಿಯವರು ಸಿದ್ದಾಪುರ, ಶಿಗ್ಗಾವಿ, ಹೊನ್ನಾವರ, ಶಿರಸಿ ಮುಂತಾದ ತಾಲೂಕುಗಳಲ್ಲಿ ತಹಶೀಲ್ದಾರರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ.
ತಹಶೀಲ್ದಾರ್ ಎಂ.ಆರ್.ಕುಲಕರ್ಣಿಯವರು ಶುಕ್ರವಾರ ತಹಶೀಲ್ದಾರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನನಗೆ ಯಲ್ಲಾಪುರ ತಾಲೂಕಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸಂತಸವಾಗಿದೆ. ಸಾರ್ವಜನಿಕರ ವಿವಿಧ ಸಮಸ್ಯೆಗಳ ಪರಿಹಾರದ ಬಗ್ಗೆ ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ, ತಾಲೂಕಾ ಆಡಳಿತಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಜಿ.ಎನ್.ಭಟ್ ತಟ್ಟಿಗದ್ದೆ, ನಾಗರಾಜ ಮದ್ಗುಣಿ, ಶಂಕರ ಭಟ್ಟ ತಾರಿಮಕ್ಕಿ, ಶ್ರೀಧರ ಅಣಲಗಾರ, ವಿಶ್ವೇಶ್ವರ ಗಾಂವ್ಕಾರ್, ಕೆ.ಎಸ್.ಭಟ್ಟ ಆನಗೋಡ, ಪ್ರಭಾವತಿ ಗೋವಿ, ಜಯರಾಜ ಗೋವಿ ತಹಶೀಲ್ದಾರ್ ಎಂ.ಆರ್.ಕುಲಕಣೀಯವರ ಜೊತೆ ವಿವಿಧ ವಿಷಯಗಳನ್ನು ಚರ್ಚಿಸಿದರು. ಪಟ್ಟಣದಲ್ಲಿನ ಪೂಟ್ ಪಾತ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ತರಕಾರಿನ ಮಾರುಕಟ್ಟೆಯ ಅವ್ಯವಸ್ಥೆ, ಅನಧಿಕೃತ ಮೀನು ಮಾರಾಟ, ಗ್ರಾಮೀಣ ಭಾಗದಲ್ಲಿನ ಸಮಸ್ಯೆ ಮುಂತಾದ ವಿವಿಧ ಜ್ವಲಂತ ಸಮಸ್ಯೆಗಳ ಪರಿಹಾರದ ಬಗ್ಗೆ ಪತ್ರಕರ್ತರು ತಹಶೀಲ್ದಾರರ ಗಮನ ಸೆಳೆದರು.
ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ
ಯಲ್ಲಾಪುರ ಪಟ್ಟಣದಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಶುಕ್ರವಾರ ತಂಬಾಕು ತನಿಖಾ ದಳದ ಅಧಿಕಾರಿಗಳು ದಾಳಿ ಮಾಡಿ, ಕೋಟ್ಪಾ ಕಾಯ್ದೆಯ ಅಡಿಯಲ್ಲಿ ಒಟ್ಟೂ ಆರು ಪ್ರಕರಣಗಳನ್ನು ದಾಖಲಿಸಿ, ಅಂಗಡಿಕಾರರಿಗೆ ಒಟ್ಟೂ 2600 ರೂಪಾಯಿಗಳ ದಂಡ ವಿಧಿಸಲಾಯಿತು. ಈ ದಾಳಿಯಲ್ಲಿ ತಾಲೂಕು ತಂಬಾಕು ತನಿಕಾ ದಳದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.