ಯಲ್ಲಾಪುರದ ದತ್ತಮಂದಿರವು ತ್ರಿಮೂರ್ತಿಗಳ ಸನ್ನಿಧಾನ, ಪಂಚಭೂತಗಳ ನೆಲೆ: ರಾಘವೇಶ್ವರ ಶ್ರೀ
ಯಲ್ಲಾಪುರ ಪಟ್ಟಣದ ನಾಯಕನಕೆರೆಯಲ್ಲಿ ನಿರ್ಮಾಣವಾದ ನೂತನ ಶಿಲಾಮಯ ದತ್ತಮಂದಿರವು ತ್ರಿಮೂರ್ತಿಗಳ ಸನ್ನಿಧಾನವಾಗಿ, ಪಂಚಭೂತಗಳ ನೆಲೆಯಾಗಿ ಕಂಗೊಳಿಸುತ್ತಿದೆ ಎಂದು ರಾಮಚಂದ್ರಾಪುರ ಮಠದ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ದತ್ತ ಮಂದಿರದಲ್ಲಿ ಬುಧವಾರ ನಡೆದ ಸೇವಾಶೀರ್ವಾದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಭಗವಂತನು ನಮಗೆ ಕೊಟ್ಟ ಸಂಪತ್ತನ್ನು, ಸುವಸ್ತುಗಳನ್ನು ನಾವು ಭಗವಂತನಿಗೆ ಶ್ರದ್ಧೆಯಿಂದ ಸಮರ್ಪಿಸಬೇಕು, ದತ್ತನ ಸೇವೆ ಮಾಡುವವರಿಗೆ ದತ್ತ ರಕ್ಷೆ ಸದಾ ಇರಲಿದೆ ಎಂದರು.
ನಾವು ದತ್ತಾತ್ರೇಯನ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳಬೇಕು, ದತ್ತಾತ್ರೇಯನ ಸೇವೆಯಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ. ಇಲ್ಲಿ ಈ ಮಂದಿರ ನಿಮಾಣವಾಗಲು ದತ್ತನ ಅನುಗ್ರಹ ಮತ್ತು ದತ್ತ ಭಕ್ತರ ಸಹಕಾರ ಕಾರಣವಾಗಿದೆ.
ಇಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಅಭಿವೃದ್ಧಿ ಕೆಲಸಗಳೂ ನಡೆಯುತ್ತಿವೆ. ಎಲ್ಲರ ಸಹಕಾರದಿಂದ ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು. ದತ್ತ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಭಕ್ತರನ್ನು ಶ್ರೀಗಳು ಮಂತ್ರಾಕ್ಷತೆ ನೀಡಿ ಅಶೀರ್ವದಿಸಿದರು.
ದೇವಾಲಯದಲ್ಲಿ ದತ್ತಮೂಲಮಂತ್ರ ಹವನ, ಕಲಾವೃದ್ಧಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಮುಖರಾದ ಪ್ರಸನ್ನ ಕೆರೆಕೈ, ಪ್ರಮೋದ ಹೆಗಡೆ, ಮೋಹನ ಹೆಗಡೆ ಹೆರವಟ್ಟಾ,ಕೆ.ಟಿ.ಭಟ್ಟ, ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ನಾಗೇಶ ಯಲ್ಲಾಪುರಕರ್, ನಾಗರಾಜ ಮದ್ಗುಣಿ, ಪ್ರಸಾದ ಹೆಗಡೆ ಮುಂತಾದವರು ಇದ್ದರು.
ಶ್ರೀಮಠದ ಪ್ರತಿನಿಧಿ ಮಹೇಶ ಚಟ್ನಳ್ಳಿ ಸ್ವಾಗತಿಸಿದರು. ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀರಂಗ ಕಟ್ಟಿ ವರದಿ ವಾಚಿಸಿದರು.
ಸಂಯೋಜನಾ ಸಮೀತಿ ರಚನೆ
ಇದೇ ಸಂದರ್ಭದಲ್ಲಿ ದೇವಾಲಯದ ಆಡಳಿತ ನಿರ್ವಹಣೆಗೆನೂತನ ಸಂಯೋಜನಾ ಸಮೀತಿಯನ್ನು ರಚಿಸಲಾಯಿತು. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಶ್ರೀಕಾಂತ ಭಟ್ಟ ಹುಬ್ಬಳ್ಳಿ, ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ಶಿವಾನಂದ ಕೊಂಡದಕುಳಿ, ಶಿವರಾಮ ಹೆಗಡೆ ಕಳಚೆ, ನಾಗೇಶ ಯಲ್ಲಾಪುರಕರ್, ರಾಮನಾಥ ಭಟ್ಟ ಅಶೋಕ ಹೆಗಡೆ, ನಾಗೇಶ ಭಟ್ಟ, ವಿ.ಎಂ.ಹೆಗಡೆ, ಸಿ.ಜಿ.ಹೆಗಡೆ, ರಮೇಶ ಹೆಗಡೆ, ನಿತ್ಯಾನಂದ ಬಾಂದೇಕರ್, ಸಂತೋಷ ಬಂಟ್, ಶಾಂತಾರಾಮ ಭಟ್ಟ ಹುಬ್ಬಳ್ಳಿ, ಮಂಜುನಾಥ ನಾಯ್ಕ, ಉಮೇಶ ಪೈ, ಸಂಧ್ಯಾ ಹೆಗಡೆ, ಸರೋಜಾ ಹೆಗಡೆ, ಶ್ರೀರಂಗ ಕಟ್ಟಿ, ನಾಗರಾಜ ಮದ್ಗುಣಿ, ಪ್ರಸಾದ ಹೆಗಡೆ, ನರಸಿಂಹ ಗಾಂವ್ಕಾರ್ ಅವರನ್ನು ಒಳಗೊಂಡ ನೂತನ ಸಂಯೋಜನಾ ಸಮೀತಿಯನ್ನು ರಚಿಸಿ ಘೋಷಣೆ ಮಾಡಲಾಯಿತು.