ರಂಗಸಹ್ಯಾದ್ರಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಯಲ್ಲಾಪುರ ಪಟ್ಟಣದ ಮಾದರಿ ಶಾಲೆಯ ಆವರಣದಲ್ಲಿ ಬೇಸಿಗೆ ಶಿಬಿರವು ಅತ್ಯಂತ ಕ್ರಿಯಾಶೀಲವಾಗಿ ನಡೆಯುತ್ತಿದೆ.
ಬೆಳಿಗ್ಗೆಯಿಂದ ಸಂಜೆಯ ವರೆಗೆ ಮಕ್ಕಳು ವಿವಿಧ ಆಟೋಟಗಳ ಜೊತೆಯಲ್ಲಿ, ಮನರಂಜನೆ ಹಾಗೂ ಸಂಸ್ಕಾರಯುತ ನಡವಳಿಕೆ, ಜೀವನ ಶಿಕ್ಷಣವನ್ನು ಈ ಶಿಬಿರದಲ್ಲಿ ಕಲಿಯುತ್ತಿದ್ದಾರೆ. ನೂರಕ್ಕೂ ಹೆಚ್ಚು ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕರಾಟೆ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಮುಂತಾದವುಗಳ ಜೊತೆ ಭಗವದ್ಗೀತೆ, ರಾಮಾಯಣ,ಮಹಾಭಾರತದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ.
ಪಾಲಕರಿಗೆ ವಿವಿಧ ಸ್ಪರ್ಧೆ ಆಯೋಜನೆ
ರಂಗಸಹ್ಯಾದ್ರಿ ಬೇಸಿಗೆ ಶಿಬಿರದಲ್ಲಿ ಮಂಗಳವಾರ ಶಿಬಿರಾರ್ಥಿಗಳ ಪಾಲಕರಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಈ ಸ್ಪರ್ಧಾ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಬೇಸಿಗೆ ರಜೆಯನ್ನು ಸದುಪಯೋಗಪಡಿಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿವೆ. ಈ ಶಿಬಿರದಲ್ಲಿ ಆಟ, ಪಾಠಗಳ ಜೊತೆ ಮೌಲ್ಯಯುತವಾದ ಜೀವನ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಈ ಶಿಬಿರವು ಮಾದರಿಯಾಗಿ ನಡೆಯುತ್ತಿದೆ ಎಂದರು.
ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಕಳೆದ 20 ವರ್ಷಗಳಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡುಬರಲಾಗಿದೆ. ನಮ್ಮ ಈ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳು ಶಿಕ್ಷಣದ ಜೊತೆಗೆ ಉತ್ತಮವಾದ ಸಂಸ್ಕಾರವನ್ನು ರೂಢಿಸಿಕೊಂಡು ಮುನ್ನೆಡೆಯುತ್ತಿರುವುದು ನಮಗೆ ಹಾಗೂ ಮಕ್ಕಳ ಪಾಲಕರಿಗೆ ಅತ್ಯಂತ ಹರ್ಷದ ಸಂಗತಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲಕರಾದ ಶೋಭಾ, ಗೌರಿ, ರೂಪಾ ಉಪಸ್ಥಿತರಿದ್ದರು.
ಮಕ್ಕಳ ಪಾಲಕರಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಬಿರದ ಶಿಕ್ಷಕರಾದ ಗಾಯತ್ರಿ ಬೋಳಗುಡ್ಡೆ, ಲಕ್ಷ್ಮೀ ಶಂಕರ ಭಟ್ಟ, ಮಂಗಲಾ ಜೋಶಿ, ಪರಮೇಶ್ವರ ನಾಯ್ಕ ಹಾಗೂ ಪಾಲಕರು ಇದ್ದರು.