ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪ್ರಸಕ್ತ ವರ್ಷದ ಭಗವದ್ಗೀತಾ ಅಭಿಯಾನವು ಯಲ್ಲಾಪುರ ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಯಶಸ್ವಿಯಾಗಿ ನಡೆಯುತ್ತಿದೆ. ತಾಲೂಕಿನ ವಿವಿಧ ದೇವಾಲಯಗಳಲ್ಲಿ, ವಿದ್ಯಾಲಯಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ಗೃಹಸ್ಥರ ಮನೆ, ಮನೆಗಳಲ್ಲಿ ಭಗವದ್ಗೀತಾ ಅಭಿಯಾನವನ್ನು ನಡೆಸಲಾಗುತ್ತಿದೆ. ಗೀತಾಚಾರ್ಯ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಭಗವದ್ಗೀತೆಯ 11ನೇ ಅಧ್ಯಾಯದ ಪಠಣ, ಪ್ರಸಾದ ವಿತರಣೆ, ಗೀತೋಪದೇಶದ ಮಹತ್ವದ ಬಗ್ಗೆ ಉಪನ್ಯಾಸ ನಡೆಯುತ್ತಿದೆ.

ಯಲ್ಲಾಪುರ ತಾಲೂಕಿನ ನೆಲೆಪಾಲಿನ ಎಸ್.ಐ.ಗಾಂವ್ಕಾರ್ ಅವರ ಮನೆಯಲ್ಲಿ ಭಗವದ್ಗೀತಾ ಅಭಿಯಾನ ಸಪ್ತಾಹವು ವಿಜೃಂಭಣೆಯಿಂದ ನಡೆಯಿತು.

ಅಭಿಯಾನ ಸಮೀತಿಯ ಪ್ರಮುಖರಾದ ಡಾ.ಶಂಕರ ಭಟ್ಟ ಬಾಲಿಗದ್ದೆ ಮಾತನಾಡಿ, ಅರ್ಜುನನನ್ನು ನಿಮಿತ್ತೀಕರಿಸಿಕೊಂಡು ಭಗವಂತನು ಭಗವದ್ಗೀತೆಯನ್ನು ಉಪದೇಶಿಸಿದ್ದು, ಭಗವದ್ಗೀತೆಯು ನಮ್ಮ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದರು.

ತಾಲೂಕಾ ಭಗವದ್ಗೀತಾ ಅಭಿಯಾನದ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಭಗವದ್ಗೀತೆ ಎಂಬ ಬೆಳಕು ಎಲ್ಲೆಡೆ ವ್ಯಾಪಿಸಬೇಕು. ಗೀತೆಯ ಸಂದೇಶವು ಎಲ್ಲರ ಮನೆ, ಮನವನ್ನು ತಲುಪಬೇಕು. ಅಭಿಯಾನವು ಎಲ್ಲೆಡೆ ಭರದಿಂದ ನಡೆಯುತ್ತಿದ್ದು, ಭಗವಂತನ ಅನುಗ್ರಹ ಹಾಗೂ ಶ್ರೀಗುರುಗಳ ಕೃಪಾರ್ಶೀವಾದ ಪಡೆಯಲು ಭಗವದ್ಗೀತಾ ಆರಾಧನೆಯು ಶ್ರೇಷ್ಠ ಮಾರ್ಗವಾಗಿದೆ ಎಂದರು.

ಅಭಿಯಾನದ ಜಿಲ್ಲಾ ಸಂಚಾಲಕರಾದ ಕೆ.ಜಿ.ಬೋಡೆ, ಪ್ರಮುಖರಾದ ಪ್ರಸನ್ನ ಗಾಂವ್ಕಾರ್, ಸಂಧ್ಯಾ ಗಾಂವ್ಕಾರ್ ಹಾಗೂ ಗ್ರಾಮಸ್ಥರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading