ಯಲ್ಲಾಪುರ : ಅತೀ ವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಸ್ಕೂಟಿಯನ್ನು ಚಲಾಯಿಸಿಕೊಂಡುಬರುತ್ತಿರುವಾಗ, ಸವಾರನ ನಿಯಂತ್ರಣ ತಪ್ಪಿದ ಸ್ಕೂಟಿ ಸ್ಕಿಡ್ ಆದ ಪರಿಣಾಮ ಸ್ಕೂಟಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ವ್ಯಕ್ತಿಯು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಕರಿಯವ್ವನಗುಂಡಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತಾಲೂಕಿನ ಹೊಸಳ್ಳಿಯ ರಾಮು ಸಾಕ್ರು ಹುಂಬೆ ತಮ್ಮ ಸ್ಕೂಟಿಯ ಹಿಂಬದಿಯಲ್ಲಿ ಹೊಸಳ್ಳಿಯ ಜನ್ನು ದಾವು ಕೋಳಾಪಟ್ಟೆ ಎಂಬುವವರನ್ನು ಕೂರಿಸಿಕೊಂಡು ಹೊಳೆನಂದಿಕಟ್ಟಾದಿಂದ ಹೊಸಳ್ಳಿ ಕಡೆಗೆ ಅತೀವೇಗವಾಗಿ ಸ್ಕೂಟಿಯನ್ನು ಚಲಾಯಿಸಿಕೊಂಡುಬಂದು ಕರಿಯವ್ವನಗುಂಡಿ ಕ್ರಾಸ್ ಸಮೀಪ ಸ್ಕೂಟಿ ಸ್ಕಿಡ್ ಆದ ಪರಿಣಾಮ ಸ್ಕೂಟಿ ಕೆಳಕ್ಕೆ ಬಿದ್ದು, ಸ್ಕೂಟಿಯಿಂದ ಬಿದ್ದ ಸವಾರ ಹಾಗೂ ಸಹಸವಾರ ಗಾಯಗೊಂಡಿದ್ದಾರೆ.
ಕೆಳಗೆ ಬಿದ್ದ ರಭಸಕ್ಕೆ ಸ್ಕೂಟಿ ಹಿಂಬದಿ ಕುಳಿತಿದ್ದ 62 ವರ್ಷದ ಜನ್ನು ಕೋಳಪಟ್ಟೆ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದೆ. ಮುಖಕ್ಕೂ ಗಾಯವಾಗಿದೆ. ಮೂಗಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸ್ಕೂಟಿ ಸವಾರ ರಾಮು ಹುಂಬೆ ಅವರಿಗೂ ಗಾಯವಾಗಿದೆ.
ಘಟನೆಯಲ್ಲಿ ಸ್ಕೂಟಿಯು ಜಕಂಗೊಂಡಿದೆ. ಈ ಘಟನೆಯು ಬುಧವಾರ ರಾತ್ರಿ 10.50 ಗಂಟೆಗೆ ನಡೆದಿದೆ. ಈ ಕುರಿತು ಪರಶುರಾಮ ಕೋಳಾಪಟ್ಟಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ.