ಕಾಡಿನಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸರ ಮನವಿ
ಯಲ್ಲಾಪುರ ತಾಲೂಕಿನ ಕಪ್ಪೆಗದ್ದೆ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯ ಶವವು ಕೊಳೆತು ದುರ್ನಾತ ಬೀರುತ್ತಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.
ಶನಿವಾರ ಕಪ್ಪೆಗದ್ದೆ ಅರಣ್ಯ ಪ್ರದೇಶದಲ್ಲಿ ಹೊಳಗೇರಿ ಮರಕ್ಕೆ ನೈಲಾನ್ ಹಗ್ಗದಿಂದ ನೇಣುಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಶವವು ಸಂಪೂರ್ಣ ಕೊಳೆತಿದೆ. 10 ದಿನಗಳ ಹಿಂದೆ ಮೃತಪಟ್ಟ ಶಂಕೆ ವ್ಯಕ್ತವಾಗಿದೆ.
ಮರದ ಟೊಂಗೆಗೆ ನೀಲಿ ಬಣ್ಣದ ಕೈಚೀಲ, ತಿಳಿ ಹಳದಿ ಬಣ್ಣದ ಅಂಗಿ, ಕಾಫಿ ಬಣ್ಣದ ಪ್ಯಾಂಟ್ ನೇತುಹಾಕಲಾಗಿರುವುದು ಕಂಡುಬಂದಿದೆ. ಮೃತಪಟ್ಟ ವ್ಯಕ್ತಿಯು ಅಂದಾಜು 30ರಿಂದ 40 ವರ್ಷ ವಯಸ್ಸಿನವನು ಎಂದು ಅಂದಾಜಿಸಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹದ ಹತ್ತಿರ ಶಿರಸಿ ಮಾರಿಕಾಂಬಾ ದೇವಾಲಯಕ್ಕೆ 3 ಸಾವಿರ ರೂ ದೇಣಿಗೆ ನೀಡಿದ ಪಾವತಿ ಹಾಗೂ ಮಾ.19ರಂದು ಶಿರಸಿಯಿಂದ ಯಲ್ಲಾಪುರಕ್ಕೆ ಪ್ರಯಾಣಿಸಿದ ಬಸ್ ಟಿಕೆಟ್, ಮದ್ಯದ ಖಾಲಿ ಪೌಚ್, ನೀರಿನ ಖಾಲಿ ಬಾಟಲ್ ಸಿಕ್ಕಿದೆ.
ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದುಬಂದರೆ ಪೊಲೀಸರಿಗೆ ತಿಳಿಸಲು ಕೋರಲಾಗಿದೆ.
ಯಲ್ಲಾಪುರ ಪೊಲಿಸ್ ಠಾಣೆ ಸಂಖ್ಯೆ: 08419261113, ಪೊಲೀಸ್ ನಿರೀಕ್ಷಕರು: 9480805257, ಪೊಲೀಸ್ ಉಪನಿರೀಕ್ಷಕರು: 9480805273 ಈ ಸಂಖ್ಯೆಗೆ ಸಂಪರ್ಕಿಸಲು ಪೊಲೀಸರು ವಿನಂತಿಸಿದ್ದಾರೆ.