ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ಕಸಬೆಯ ಶೇಡಿಕೆರೆ ಮಹಾಗಣಪತಿ ದೇವಾಲಯದಲ್ಲಿ ಕಳ್ಳತನವಾಗಿದ್ದು, ದೇವಾಲಯದ ಗರ್ಭಗುಡಿಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಹಿತ್ತಾಳೆ ಗಂಟೆಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ.
ದೇವಸ್ಥಾನದ ಗರ್ಭಗುಡಿಯ ಮುಂದೆ ನೇತುಹಾಕಿದ್ದ 4 ದೊಡ್ಡ ಹಿತ್ತಾಳೆ ಗಂಟೆಗಳು, ಗರ್ಭಗುಡಿಯ ಒಳಗೆ ಇದ್ದ ಆರು ಹಿತ್ತಾಳೆ ಗಂಟೆಗಳು ಕಳ್ಳತನವಾಗಿವೆ. ಗರ್ಭಗುಡಿಯ ಒಳಗೆ ಇದ್ದ 1 ತಾಮ್ರದ ಕೊಡ, 4 ಹಿತ್ತಾಳೆಯ ಕೈ ಆರತಿ, 4 ಹಿತ್ತಾಳೆಯ ತಾಟು,
ದೇವಸ್ಥಾನದ ಪಕ್ಕದ ರೂಂನಲ್ಲಿ ಇದ್ದ 6 ಕೈ ಆರತಿ, 1 ಹಿತ್ತಾಳೆಯ ತಾಟು, 2 ಹಿತ್ತಾಳೆ ಚೊಂಬು, 2 ಹಿತ್ತಾಳೆ ದೀಪ, ದೇವಸ್ಥಾನದ ಪಕ್ಕದ ರೂಂನಲ್ಲಿದ್ದ 5 ಅಲ್ಯೂಮಿನಿಯಂ ತೋಪು, 4, ಸ್ಟೀಲ್ ತೋಪು, 1 ಅಲ್ಯೂಮಿನಿಯಂ ಹಂಡೆ ಇವುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳತನವಾದ ಸ್ವತ್ತುಗಳ ಒಟ್ಟೂ ಮೌಲ್ಯ 21,900 ರೂ ಎಂದು ಅಂದಾಜಿಸಲಾಗಿದೆ.
ಈ ಕುರಿತು ಶಿವರಾಮ ಕೃಷ್ಣ ಭಟ್ಟ ಸುಣಜೋಗ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಏ.18ರಂದು ಸಾಯಂಕಾಲ 7.30ರಿಂದ ಏ.19ರ ಬೆಳಿಗ್ಗೆ 10 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ.