ಮನೆಮನೆಗೆ ಪ್ರವೇಶಾತಿ ಅಭಿಯಾನ: ಉನ್ನತ ಶಿಕ್ಷಣದ ಮಹತ್ವ ಸಾರಿದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು
ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಹಾಗೂ ಬಿ.ಸಿ.ಎ ತರಗತಿಗಳ ಮೊದಲ ವರ್ಷದ ಪ್ರವೇಶಾತಿ ಪ್ರಕ್ರಿಯೆಯು ಭರದಿಂದ ನಡೆಯುತ್ತಿದೆ.
ಪ್ರಾಂಶುಪಾಲರಾದ ಡಾ. ಆರ್. ಡಿ. ಜನಾರ್ದನ್ ಅವರ ಸಮರ್ಥ ನೇತೃತ್ವದಲ್ಲಿ ಕಾಲೇಜಿನ ಉಪನ್ಯಾಸಕರ ತಂಡವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಉನ್ನತ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕಾಲೇಜಿನ ತಂಡವು ನೇರವಾಗಿ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ತೆರಳಿ ಪ್ರವೇಶಾತಿ ಪಡೆಯುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಯಲ್ಲಾಪುರ ತಾಲೂಕಿನ ಕಳಸೂರು, ಶಿಡ್ಲಗುಂಡಿ, ಮೈನಳ್ಳಿ, ಗೊದ್ನಾಳ, ಕಾರೇವಾಡ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿದ ಪ್ರಮುಖ ಗ್ರಾಮಗಳ ಮನೆಮನೆಗೆ ತೆರಳಿ ಪೋಷಕರಿಗೆಮತ್ತು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಹತ್ವವನ್ನು ತಿಳಿಸಿ ಪ್ರವೇಶಾತಿ ಮಾಡಿಕೊಂಡಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಆರ್. ಡಿ. ಜನಾರ್ದನ್, ಉಪನ್ಯಾಸಕರಾದ ರವಿ ಭಟ್, ಡಾ. ರವಿ ಶೇಷಗಿರಿ, ಪರಮಾನಂದ ದುಂಡಿ, ಅಸ್ಲಾಮ್ ಖಾನ್ ಈ ವಿಶೇಷ ದಾಖಲಾತಿ ಆಂದೋಲನದಲ್ಲಿ ಪಾಲ್ಗೊಂಡರು.