ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ (ಎಲ್.ಎಸ್.ಎಂ.ಪಿ) ಪ್ರಗತಿಪಥದಲ್ಲಿ ಮುನ್ನೆಡೆಯುತ್ತಿದೆ. ಸಂಘಕ್ಕೆ ಕಳೆದ ಆರ್ಥಿಕ ವರ್ಷದಲ್ಲಿ 52,06020 ರೂ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಮಾಹಿತಿ ನೀಡಿದ್ದಾರೆ.

ಸಂಘದ ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರ ಹಾಗೂ ಎಲ್ಲರ ಸಹಕಾರದಿಂದ ಸಂಘಕ್ಕೆ ಇಷ್ಟು ದೊಡ್ಡ ಲಾಭವಾಗಿದೆ. ಸದಸ್ಯರಿಗೆ ಶೇ.7ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ. ಸಂಘದ ಆವರಣದಲ್ಲಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣದಿಂದ ಸಂಘಕ್ಕೆ ವಾರ್ಷಿಕ 23 ಲಕ್ಷ ರೂ ಆದಾಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಘದ ವತಿಯಿಂದ ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ಮುಂತಾದವುಗಳನ್ನು ಆರಂಭಿಸುವ ಉದ್ದೇಶವಿದೆ.

ಸಂಘದ ಸಾಲ ವಸೂಲಾತಿ ಉತ್ತಮವಾಗಿದೆ. ಸಂಘದ ಮೂಲಕ ರೇಶನ್, ಕಿರಾಣಿ, ಪಶು ಆಹಾರ ವ್ಯವಹಾರಗಳನ್ನು ನಡೆಸಿಕೊಂಡುಬರಲಾಗಿದೆ. ಸಂಘದ ಕಾರ್ಯವ್ಯಾಪ್ತಿಯ ಸದಸ್ಯರು ಸಂಘದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ವಿಕ್ರಿ ಮಾಡುತ್ತಿದ್ದಾರೆ. ಸಂಘವು ಸದಸ್ಯರ ಹಿತದೃಷ್ಟಿಯಿಂದ ಆಪತ್ ಠೇವು ಯೋಜನೆ ಜಾರಿಮಾಡಿದೆ. ಈ ವರ್ಷ ಮೂರು ಜನರಿಗೆ ಆಪತ್ ಠೇವು ಯೋಜನೆಯಿಂದ 71300 ರೂ ನೀಡಲಾಗಿದೆ.

ಸಂಘದ ಸದಸ್ಯರು ಮೃತಪಟ್ಟಲ್ಲಿ ಅಂತ್ಯ ಸಂಸ್ಕಾರ ನಿಧಿಯಿಂದ ಆರ್ಥಿಕ ಸಹಾಯ ನೀಡಲಾಗುತ್ತಿದ್ದು, ಈ ವರ್ಷ 15 ಸದಸ್ಯರಿಗೆ ತಲಾ 5 ಸಾವಿರ ರೂ ನೀಡಲಾಗಿದೆ. ಸಂಘದ ಸದಸ್ಯರು ಸಂಘದ ಮೂಲಕವೇ ವ್ಯವಹಾರ ನಡೆಸಿ ನಮ್ಮ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಎಲ್.ಎಸ್.ಎಂ.ಪಿ ಸೊಸೈಟಿಯ ಪ್ರಗತಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಸೊಸೈಟಿಯ ವಾರ್ಷಿಕ ಸರ್ವಸಾಧಾರಣ ಸಭೆಯು ಸೆ.13 ರಂದು ಮಧ್ಯಾಹ್ನ 3.30 ಗಂಟೆಗೆ ಹುಲ್ಲೋರಮನೆ ಮಾರುತಿ ಗಜಾನನ ದೇವಾಲಯದ ಸಭಾಭವನದಲ್ಲಿ ನಡೆಯಲಿದೆ. ಸಕಾಲದಲ್ಲಿ ಎಲ್ಲರೂ ಆಗಮಿಸಬೇಕೆಂದು ಕೋರುತ್ತೇನೆ-ನಾಗರಾಜ ಕವಡಿಕೇರಿ ಅಧ್ಯಕ್ಷರು ಎಲ್.ಎಸ್.ಎಂ.ಪಿ ಯಲ್ಲಾಪುರ

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ.ಆರ್.ಹೆಗಡೆ, ನಿರ್ದೇಶಕರಾದ ನರಸಿಂಹ ಕೋಣೆಮನೆ, ಆರ್.ಎಸ್.ಭಟ್ಟ, ತಿಮ್ಮಣ್ಣ ಭಟ್ಟ ಘಟ್ಟಿಮನೆ, ಸುಬ್ರಾಯ ಭಟ್ಟ ದಾನ್ಯಾನಕೊಪ್ಪ, ಅಪ್ಪು ಆಚಾರಿ, ಗ್ಯಾಬ್ರಿಯಲ್ ಫರ್ನಾಂಡಿಸ್, ಹನುಮಂತ ಕೊರವರ್, ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್.ಹೆಗಡೆ ಮುಂತಾದವರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading