ಮಾವಿನಮನೆ ಸಹಕಾರ ಸಂಘಕ್ಕೆ 52 ಲಕ್ಷ ರೂ ಲಾಭ : ಸುಬ್ರಾಯ ಬೋಳ್ಮನೆ
ಯಲ್ಲಾಪುರ ತಾಲೂಕಿನ ಮಲವಳ್ಳಿಯ ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 52,28,376 ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಬ್ರಾಯ ಬೋಳ್ಮನೆ ಹೇಳಿದರು.
ಮಲವಳ್ಳಿಯ ರಾಮಲಿಂಗೇಶ್ವರ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಸಂಘದ ಏಳಿಗೆಗೆ ಸದಸ್ಯರೇ ಜೀವಾಳವಾಗಿದ್ದು, ಸದಸ್ಯರು ಸಂಘದ ಮೂಲಕವೇ ಎಲ್ಲ ವ್ಯವಹಾರಗಳನ್ನು ಮಾಡಬೇಕು ಎಂದು ವಿನಂತಿಸಿದರು.
ಸಂಘದ ಮೂಲಕ ಅಡಿಕೆ, ಕಾಳುಮೆಣಸು ವಿಕ್ರಿ ಮಾಡಿದವರಿಗೆ 18,70995 ರೂ ಪ್ರೋತ್ಸಾಹಧನವನ್ನು ನೀಡಿದ್ದೇವೆ. ಕಿರಾಣಿ ಗ್ರಾಹಕರಿಗೆ 209764 ರೂ ಪ್ರೋತ್ಸಾಹಧನ ನೀಡಿದ್ದೇವೆ. ಈ ವರ್ಷ ಸಂಘದ ಮೂಲಕ ಅತೀ ಹೆಚ್ಚು ಅಡಿಕೆ ವಿಕ್ರಿಯಾಗಿದೆ. ಸಂಘದ ದುಡಿಯುವ ಬಂಡವಾಳದ ಪ್ರಮಾಣವೂ ಜಾಸ್ತಿಯಾಗಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟಿ.ಎಂ.ಎಸ್.ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಸಹ್ಯಾದ್ರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಮುಂತಾದವರು ಮಾತನಾಡಿದರು. ಸಂಘದ ನಿರ್ದೇಶಕರು, ಸದಸ್ಯರು ಇದ್ದರು. ಮುಖ್ಯ ಕಾರ್ಯನಿರ್ವಾಹಕ ದತ್ತಾತ್ರೇಯ ಗಾಂವ್ಕಾರ್ ನೆಲೆಪಾಲ ವಾರ್ಷಿಕ ವರದಿ ಮಂಡಿಸಿದರು.
ಸಭೆಯ ನಂತರ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆಯವರನ್ನು ಸನ್ಮಾನಿಸಲಾಯಿತು.