ತಂಬಾಕು ತನಿಖಾ ದಳದ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ: ಅಂಗಡಿಕಾರರಿಗೆ ದಂಡ
ಜಿಲ್ಲಾ ತಂಬಾಕು ಕೋಶ ಕಾರವಾರ, ಉತ್ತರ ಕನ್ನಡ, ಇವರ ಆದೇಶದಂತೆ ಯಲ್ಲಾಪುರ ತಾಲೂಕಾ ತಂಬಾಕು ತನಿಖಾ ದಳದ ಅಧಿಕಾರಿಗಳು ಬುಧವಾರ ವಿವಿದೆಡೆ ಅಂಗಡಿಗಳ ಮೇಲೆ ದಾಳಿ ನಡೆಸಿ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಕಾರರಿಗೆ ದಂಡ ವಿಧಿಸಿದರು.
ಯಲ್ಲಾಪುರ ನಗರ ಹಾಗೂ ಉಮ್ಮಚಗಿ ಗ್ರಾಮದಲ್ಲಿ ತಂಬಾಕು ದಾಳಿ ನಡೆಸಲಾಯಿತು. ಸಿಗರೇಟುಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರವರಾಜು ಮತ್ತು ವಿತರಣೆಯ ವಿನಿಮಯ, (ಕರ್ನಾಟಕ ತಿದ್ದುಪಡಿ) ಅಧಿನಿಯಮ 2024ರ ಕುರಿತು ಜಾಗೃತಿ ಮೂಡಿಸಿ ಅಂಗಡಿಕಾರರಿಗೆ ಒಟ್ಟೂ ರೂ. 5700 ದಂಡ ವಿಧಿಸಲಾಯಿತು.
ಈ ಸಂದರ್ಭದಲ್ಲಿ ಉಪತಹಸಿಲ್ದಾರ ಕೆ.ಎನ್. ಫರ್ನಾಂಡಿಸ್, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಎಂ.ಎಂ. ಮಂಗಿ, ಎ.ಎಸ್.ಐ. ಅಣ್ಣಪ್ಪ ಬಿ. ಕೊಪ್ಪದ, ಕಾರ್ಮಿಕ ನಿರೀಕ್ಷಕ ಫಕ್ಕಿರಪ್ಪಾ ಗೋಡಿ, ತಾಲೂಕು ಪಂಚಾಯತ ಸಿಬ್ಬಂದಿ ಗಣಪತಿ ಭಾಗವತ್,
ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಗುರುನಾಥ ಗಡಗಿ, ಐಸಿಡಿಎಸ್ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಯು. ಜೊಸೆಫ್, ವೀರುಪಾಕ್ಷಪ್ಪ ಶಿರೂರ, ಎಸ್.ಟಿ.ಎಸ್. ರಾಹುಲ್ ಶೆಟ್ ಮುಂತಾದವರು ಇದ್ದರು.