ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಪ್ರಸಕ್ತ ಸಾಲಿನ ಉತ್ತರಕನ್ನಡ ಜಿಲ್ಲಾಮಟ್ಟದ ಅಭಿಯಾನದ ಉದ್ಘಾಟನಾ ಸಮಾರಂಭವು ಭಟ್ಕಳ ತಾಲೂಕಿನ ಶಿರಾಲಿಯ ಸಿದ್ಧಾರ್ಥ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಸಭಾ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಶ್ರೀನಿವಾಸ ಮಹಾಲೆ ಮಾತನಾಡಿ, ನಿತ್ಯ ಭಗವದ್ಗೀತಾ ಪಠಣ ಮಾಡುವುದರಿಂದ ಜೀವನ ಸಾರ್ಥಕವಾಗುತ್ತದೆ. ನಮ್ಮ ಸನಾತನ ಶ್ರೇಷ್ಠ ಪರಂಪರೆಯನ್ನು ಕಾಪಾಡಿಕೊಳ್ಳಬೇಕು. ಭಗವದ್ಗೀತೆಯ ಮಹತ್ವವನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ಅಭಿಯಾನವನ್ನು ಎಲ್ಲೆಡೆ ಯಶಸ್ವಿಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ, ಉದ್ಯಮಿ ಮುರಳಿಧರ ಪ್ರಭು ಮಾತನಾಡಿ, ಭಗವದ್ಗೀತೆಯನ್ನು ಓದುವುದರಿಂದ ಮನಸ್ಸಿನ ಏಕಾಗೃತೆ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ. ಭಗವದ್ಗೀತೆಯ ಆರಾಧನೆಯಿಂದ ಲೌಕಿಕ ಮತ್ತು ಅಲೌಕಿಕ ಪ್ರಯೋಜನ ಬಹಳ ಇದೆ ಎಂದರು. ಅಭಿಯಾನ ಸಮೀತಿಯ ಪ್ರಮುಖರಾದ ಡಾ.ಶಂಕರ ಭಟ್ಟ ಬಾಲೀಗದ್ದೆ ಅಭಿಯಾನದ ಚಟುವಟಿಕೆಗಳನ್ನು ವಿವರಿಸಿದರು.
ಯಲ್ಲಾಪುರ ತಾಲೂಕಾ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ, ಪ್ರಾಚಾರ್ಯೆ ಅರ್ಚನಾ ನಾಯ್ಕ, ಜಿಲ್ಲಾ ಸಂಚಾಲಕ ಕೆ.ಜಿ.ಬೋಡೆ, ಸ್ಥಳಿಯ ಪ್ರಮುಖರಾದ ರಮೇಶ ಉಪಾಧ್ಯಾಯ, ಆನಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ನೂರಾರು ಜನರು ಏಕಕಂಠದಲ್ಲಿ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯವನ್ನು ಪಠಿಸಿದರು. ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು.