ಹಿಂದೂ ಸಮಾಜ ಇನ್ನಷ್ಟು ಗಟ್ಟಿಯಾಗಲಿ : ಡಾ. ವಿಶ್ವಸಂತೋಷ ಭಾರತೀ ಸ್ವಾಮೀಜಿ
ನಮ್ಮ ಸನಾತನ ಧರ್ಮ ಅತ್ಯಂತ ಶ್ರೇಷ್ಠವಾದದ್ದು, ಸನಾತನ ಧರ್ಮದಲ್ಲಿ ಹುಟ್ಟುವುದಕ್ಕೆ ಪುಣ್ಯ ಬೇಕು, ಭಾರತೀಯ ಪರಂಪರೆ, ಸಂಸ್ಕಾರ, ಸಂಸ್ಕೃತಿಗಳುಜಗತ್ತಿಗೇ ಮಾದರಿಯಾಗಿದ್ದು, ಇಂತಹ ಶ್ರೇಷ್ಠ ಪರಂಪರೆ ಮುಂದುವರಿಯಲು ಹಿಂದೂ ಸಮಾಜ ಇನ್ನಷ್ಟು ಗಟ್ಟಿಯಾಗಬೇಕು ಎಂದು ಬಾರ್ಕೂರು ಸಂಸ್ಥಾನದ ವಿದ್ಯಾವಾಚಸ್ಪತಿ ಶ್ರೀಮದ್ ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಹೇಳಿದರು.
ಯಲ್ಲಾಪುರ ಪಟ್ಟಣದ ಗಾಂಧಿ ಕುಟೀರದಲ್ಲಿ ಶನಿವಾರ ಸಂಜೆ ನಡೆದ ಎರಡನೇ ದಿನದ ಸಂಕಲ್ಪ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸನಾತನ ಧರ್ಮದ ಮಹತ್ವ, ಕೌಟುಂಬಿಕ ಮೌಲ್ಯಗಳು, ನಮ್ಮ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಮಕ್ಕಳಿಗೆ ಸರಿಯಾಗಿ ತಿಳಿಸಿಕೊಡಬೇಕು, ಮಕ್ಕಳು ಪದವೀಧರರಾಗಿ ಉದ್ಯೋಗ, ಹಣ ಗಳಿಸಿದರೆ ಮಾತ್ರ ಸಾಲದು, ವಿದ್ಯಾವಂತರಾಗಿ ತಂದೆ,ತಾಯಿ, ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳುವಂತವರಾಗಬೇಕು.
ನಾನಾ ಕಾರಣಗಳಿಂದಾಗಿ ನಮ್ಮ ಕೌಟುಂಬಿಕ ಸಂಬಂಧಗಳು ಶಿಥಿಲವಾಗುತ್ತಿವೆ, ನಮ್ಮ ಸಂಪ್ರದಾಯ, ಶಿಷ್ಟಾಚಾರಗಳು ಮರೆಯಾಗುತ್ತಿವೆ. ಭಾರತೀಯ ಭಾಷೆಗಳು, ಇಲ್ಲಿನ ಶಿಷ್ಟಾಚಾರ, ಆಹಾರ ಕ್ರಮ ಬಹಳ ವಿಶಿಷ್ಟವಾದದ್ದಾಗಿದೆ. ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿದ ನಮ್ಮ ಆಚರಣೆಗಳ ಬಗ್ಗೆ ನಮಗೆ ಸರಿಯಾದ ಅರಿವು ಮೂಡಬೇಕು.
ನಮ್ಮ ಸಂಪ್ರದಾಯ, ಶಿಷ್ಟಾಚಾರಗಳನ್ನು ಕಾಪಾಡಿಕೊಳ್ಳಬೇಕು. ಕೋಟ್ಯಾಂತರ ವರ್ಷದ ಇತಿಹಾಸ ಇರುವ ದೇಶ ನಮ್ಮ ಭಾರತವಾಗಿದ್ದು ಈ ಬಗ್ಗೆ ನಾವೆಲ್ಲರೂ ಹೆಮ್ಮೆಪಡಬೇಕು ಎಂದ ಅವರು,ನಮ್ಮ ದೇಶದಲ್ಲಿ ಹಿಂದೂಗಳ ಸಂತಾನ ವೃದ್ಧಿಯಾಗಬೇಕು, ಭವಿಷ್ಯದ ದೃಷ್ಟಿಯಿಂದ ಕನಿಷ್ಠ ಮೂರು ಮಕ್ಕಳನ್ನು ಹೆರುವಂತಾಗಬೇಕು, ಮಕ್ಕಳನ್ನು ಸಾಕಲು ಕಷ್ಟವಿದ್ದರೆ ನಮ್ಮ ಮಠಕ್ಕೆ ತಿಳಿಸಿದರೆ ನಾವು ಮಕ್ಕಳ ಯೋಗಕ್ಷೇಮವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತೇವೆ ಎಂದರು.
ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ನಾಗರಾಜ ನಾಯ್ಕ, ಪ್ರಮುಖರಾದ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಬಸವರಾಜ ಓಶಿಮಠ, ಮಹೇಶ ದೇಸಾಯಿ, ಪತ್ರಕರ್ತರಾದ ಪ್ರವೀಣ ಹೆಗಡೆ, ನಾಗರಾಜ ಮತ್ತಿಗಾರ ಮುಂತಾದವರು ಇದ್ದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾದ ಹೆಗಡೆ ವಂದಿಸಿದರು. ಸಾಧಕರಾದ ಕಲ್ಲಪ್ಪ ನಾಯ್ಕ, ಯಮುನಾ ನಾಯ್ಕ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.