ಡಿ.8ರಂದು ಯಲ್ಲಾಪುರಕ್ಕೆ ಜ್ಞಾನೇಶ್ವರಿ ಪೀಠದ ಉಭಯ ಶ್ರೀಗಳ ಆಗಮನ: ದೈವಜ್ಞ ದರ್ಶನ ಸಮಾರಂಭ
ಶ್ರೀಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠದ ಜ್ಞಾನೇಶ್ವರಿ ಪೀಠದ ಹಿರಿಯ ಶ್ರೀಗಳಾದ ಪರಮಪೂಜ್ಯ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಯವರು ಹಾಗೂ ಕಿರಿಯ ಶ್ರೀಗಳಾದ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಯವರು ಡಿ. 8 ಸೋಮವಾರದಂದು ಯಲ್ಲಾಪುರ ಪಟ್ಟಣಕ್ಕೆ ಆಗಮಿಸಲಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದ ರೈತ ಭವನದಲ್ಲಿ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ದೈವಜ್ಞ ದರ್ಶನ ಸಮಾರಂಭ ನಡೆಯಲಿದೆ. ಈ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಪಟ್ಟಣದಲ್ಲಿ ಮಂಗಳವಾರ ತಾಲೂಕಾ ದೈವಜ್ಞ ಹಿತವರ್ಧಕ ಸಂಘ ಹಾಗೂ ಜ್ಞಾನೇಶ್ವರಿ ಮಹಿಳಾ ಮಂಡಳ ಮತ್ತು ಸರಾಫ್ ಸಂಘದ ಪ್ರಮುಖರು ಬಿಡುಗಡೆಗೊಳಿಸಿದರು. ತಾಲೂಕಾ ದೈವಜ್ಞ ಹಿತವರ್ಧಕ ಸಂಘದ ಅಧ್ಯಕ್ಷ ಸುಬ್ರಾಯ ಅಣವೇಕರ ಮಾತನಾಡಿ, ಈ ಸಮಾರಂಭದಲ್ಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ದೈವಜ್ಞ ಸಮಾಜದ ಪ್ರಮುಖರಾದ ಪ್ರಕಾಶ ಶೇಟ್ ಮಾತನಾಡಿ, ಉಭಯ ಶ್ರೀಗಳನ್ನು ಪಟ್ಟಣದ ಮಾಗೋಡ ಕ್ರಾಸ್ ನಿಂದ ಬೈಕ್ ರ್ಯಾಲಿಯಮೂಲಕ ಬರಮಾಡಿಕೊಳ್ಳಲಾಗುವುದು. ನಂತರ ಪಟ್ಟಣದ ಪೊಲೀಸ್ ಸ್ಟೇಶನ್ ವೃತ್ತದಿಂದ ಎಪಿಎಂಸಿ ಆವರಣದ ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಚಂಡೆವಾದ್ಯ ತಂಡ, ಡೋಲು ವಾದ್ಯ ತಂಡ, ನೃತ್ಯ ತಂಡಗಳು ಭಾಗವಹಿಸಲಿವೆ. ರೈತಭವನದಲ್ಲಿ ನಡೆಯುವ ದೈವಜ್ಞ ದರ್ಶನ ಸಮಾರಂಭಉದ್ಘಾಟನೆ, ಶ್ರೀಗಳ ಪಾದಪೂಜೆ, ಆಶೀರ್ವಚನ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ರವಿ ಶ್ರೀಕಾಂತ ಗಾಂವ್ಕರ್, ಪ್ರಮುಖರಾದ ಡಾ.ಉದಯ ರಾಯ್ಕರ್, ಸುಧಾಕರ ರಾಯ್ಕರ್, ಪ್ರಭಾಕರ ವೆರ್ಣೇಕರ್, ಸುಬ್ರಹ್ಮಣ್ಯ ರೇವಣಕರ್, ಸವಿತಾ ಶೇಟ್, ಪೂಜಾ ಶೇಟ್, ಸುರೇಶ ರೇವಣಕರ್, ವಿನಯಕ ಪಾವುಸ್ಕರ್, ವಿನಾಯಕ ರೇವಣ್ಕರ್, ಸುರೇಶ ಭಟ್ಟ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಗಿರೀಶ ರೇವಣ್ಕರ್, ಮಂಜುನಾಥ ಶೇಟ್, ಉಲ್ಲಾಸ್ ಪಾಟೀಲ್, ಜ್ಞಾನೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಪೂಜಾ ಶೇಟ್, ಉಪಾಧ್ಯಕ್ಷೆ ವಂದನಾ ಶೇಟ್ ಮುಂತಾದವರು ಇದ್ದರು.