ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ಅಂಚಿನಲ್ಲಿ ಹಾಗೂ ಬಸ್ ನಿಲ್ದಾಣದ ಎದುರಿನಲ್ಲಿ ಫೂಟ್ ಪಾತ್ ಮೇಲಿದ್ದ ಅಂಗಡಿಗಳನ್ನು ಶುಕ್ರವಾರ ತೆರವುಗೊಳಿಸಲಾಗಿದೆ.
ಫೂಟ್ ಪಾತ್ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲು ಅಂಗಡಿಕಾರರಿಗೆ ಪಟ್ಟಣ ಪಂಚಾಯತಿಯಿಂದ ಜ.15ರ ವರೆಗೆ ಗಡುವು ನೀಡಲಾಗಿತ್ತು. ಮುಂಬರುವ ಗ್ರಾಮದೇವಿ ಜಾತ್ರೆಯಲ್ಲಿ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೂಟ್ ಪಾತ್ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಕಳೆದ ತಿಂಗಳು ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಸೂಚಿಸಿದ್ದರು.
ಜ.15ರ ಒಳಗಾಗಿ ಅಂಗಡಿಕಾರು ತಮ್ಮ ಅಂಗಡಿಗಳನ್ನು ಸ್ವಯಂ ತೆರವುಗೊಳಿಸಬೇಕು ಇಲ್ಲದಿದ್ದರೆ ಪಟ್ಟಣ ಪಂಚಾಯತಿ ವತಿಯಿಂದ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ಅಂಗಡಿಕಾರರಿಗೆ ಸೂಚಿಸಿದ್ದರು. ಶುಕ್ರವಾರ ಅಂಗಡಿಕಾರರು ತಾವೇ ತಮ್ಮ ಅಂಗಡಿಗಳನ್ನು ಸ್ವಯಂ ತೆರವುಗೊಳಿಸಿದ್ದಾರೆ.
ವಿರಾಟ ಹಿಂದೂ ಸಮಾವೇಶಕ್ಕೆ ಸಕಲ ಸಿದ್ಧತೆ
ಯಲ್ಲಾಪುರ ಸಂಘ ಶತಾಬ್ದಿಯ ನಿಮಿತ್ತ ಪಟ್ಟಣದಲ್ಲಿ ನಡೆಯಲಿರುವ ವಿರಾಟ ಹಿಂದೂ ಸಮಾವೇಶಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ. ಜ.17 ಶನಿವಾರ ಸಂಜೆ 4 ಗಂಟೆಗೆ ಪಟ್ಟಣದ ಗ್ರಾಮದೇವಿ ದೇವಸ್ಥಾನದಿಂದ ವಾಯ್.ಟಿ.ಎಸ್.ಎಸ್ ಮೈದಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. 5 ಗಂಟೆಗೆ ವೈ.ಟಿ.ಎಸ್.ಎಸ್. ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಾಮೂಹಿಕ ಭಗವದ್ಗೀತಾ ಪಠಣ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಸಿದ್ದಾಪುರದ ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮೀಜಿಯವರು ಸಾನಿಧ್ಯ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಂತರ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಮಾವೇಶದ ಕೊನೆಯಲ್ಲಿ ಸಹಭೋಜನ ಏರ್ಪಡಿಸಲಾಗಿದೆ.