ಯಲ್ಲಾಪುರ ಪಟ್ಟಣದ ಶ್ರೀ ಗ್ರಾಮದೇವಿ ಜಾತ್ರೆ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ-52 ರ ರಸ್ತೆ ಬದಿಗೆ ಅಂಗಡಿ ಮುಂಗ್ಗಟ್ಟುಗಳು ಹಾಕುವುದರಿಂದಜನದಟ್ಟನೆಯಾಗಿ ವಾಹನ ಸಂಚಾರ ಅನಾನೂಕೂಲವಾಗುವುದರಿಂದ ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಫೆ.10 ರ ರಾತ್ರಿ 12 ಗಂಟೆಯಿಂದ ಫೆ.19 ರ ರಾತ್ರಿ 12 ಗಂಟೆಯವರೆಗೆ ಯಲ್ಲಾಪುರ ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಕಲ್ಪ ಹೋಟೆಲ್ ಕ್ರಾಸ್ನಿಂದ ಸಂಭ್ರಮ ಹೋಟೆಲ್ ಕ್ರಾಸ್ ವರೆಗೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಬದಲಿ ಸಂಚಾರ ಮಾರ್ಗವಾಗಿ ಸಂಕಲ್ಪ ಕ್ರಾಸ್ನಿಂದ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ ಸರ್ಕಲ್ ಮುಖಾಂತರ ಸಂಭ್ರಮ ಕ್ರಾಸ್ನಿಂದ ರಾಷ್ಟ್ರೀಯ ಹೆದ್ದಾರಿ-52 ರಲ್ಲಿ ವಾಹನ ಸಂಚರಿಸುವುದು. ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗುವ ಲಘು ವಾಹನಗಳು ತಟಗಾರ ಕ್ರಾಸ್- ನಿಸರ್ಗಮನೆ-ಗೇರುಕೊಂಬೆ ಚೆಕ್ ಪೋಸ್ಟ್-ಬಿಸ್ ಗೋಡ ಕ್ರಾಸ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ-52 ಹುಬ್ಬಳ್ಳಿಗೆ ಸಂಚಾರಿಸುವುದು.
ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗುವ ಭಾರಿ ವಾಹನಗಳು ಇಡಗುಂದಿಯ ಭಾರಿ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಹಾಗೂ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಸಾಗುವ ಭಾರಿ ವಾಹನಗಳು ಹಿಟ್ಟಿನ ಬೈಲ್ ಭಾರಿ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಫೆ.11 ರಿಂದ ಫೆ.19 ರವರೆಗೆ ಪ್ರತಿ ದಿನ ಸಂಜೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ತಂಗುವುದು. ಫೆ.11 ರಿಂದ ಫೆ.19 ರ ವರೆಗೆ ಬೀಸಗೋಡ ಕ್ರಾಸ್-ಸಂಭ್ರಮ ಕ್ರಾಸ್- ಅಂಬೇಡ್ಕರ್ ಸರ್ಕಲ್-ಬೆಲ್ ರಸ್ತೆ- ಸಂಕಲ್ಪ ಕಾಸ್-ತಟಗಾರ ಕ್ರಾಸ್ ವರೆಗಿನ ಎರಡು ಬದಿಯ ರಸ್ತೆಯಲ್ಲಿ ಯಾವುದೇ ವಾಹನಗಳು ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.