ಗ್ರಾಮದೇವಿ ಜಾತ್ರಾ ಮೆರವಣಿಗೆಗೆ ಕ್ಷಣಗಣನೆ: ಎಲ್ಲೆಡೆ ಸಡಗರ, ಸಂಭ್ರಮ
ರಾಜ್ಯದ ಪ್ರಮುಖ ದೊಡ್ಡ ಜಾತ್ರೆಗಳಲ್ಲಿ ಒಂದಾದ ಯಲ್ಲಾಪುರ ಗ್ರಾಮದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಬುಧವಾರ ಮಧ್ಯಾಹ್ನ 3.30 ಗಂಟೆಗೆ ಗ್ರಾಮದೇವಿ ದೇವಾಲಯದಿಂದ ಗ್ರಾಮದೇವಿಯರ ಭವ್ಯ ಮೆರವಣಿಗೆ ಆರಂಭವಾಗಲಿದೆ.
ವಿಶೇಷ ಪುರವಣಿ ಬಿಡುಗಡೆ
ಯಲ್ಲಾಪುರ ಗ್ರಾಮದೇವಿ ಜಾತ್ರೆಯ ನಿಮಿತ್ತ ಸುಜ್ಞಾನ ವಾಹಿನಿ ಪತ್ರಿಕೆ ಹಾಗೂ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಮಾಧ್ಯಮಗಳಲ್ಲಿ ಬುಧವಾರ 12 ಪುಟಗಳ ಅತ್ಯಾಕರ್ಷಕ, ವರ್ಣಮಯ ಸಂಗ್ರಹಯೋಗ್ಯ ಪುರವಣಿಯನ್ನು ಪ್ರಕಟಿಸಲಾಗಿದೆ. ಈ ಪುರವಣಿಯನ್ನು ಗ್ರಾಮದೇವಿ ದೇವಾಲಯದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಬಿಡುಗಡೆಗೊಳಿಸಿದರು.
ಗ್ರಾಮದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ ಪುರವಣಿಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್, ಸುಜ್ಞಾನ ನೆಟ್ ವರ್ಕ್ಸ್ ಮಾಧ್ಯಮ ಸಮೂಹದ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ, ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಹಾಗೂ ಪ್ರಮುಖರಾದ ರವಿ ಶಾನಭಾಗ ಉಪಸ್ಥಿತರಿದ್ದರು.
ಜಾತ್ರಾಮಂಟಪದಲ್ಲಿ ಸುಜ್ಞಾನ ವಾಹಿನಿ ಪುರವಣಿಯನ್ನು ಜಾತ್ರಾ ಉಸ್ತುವಾರಿ ಪ್ರಮುಖರಾದ ಉದ್ಯಮಿ ಬಾಲಕೃಷ್ಣ ನಾಯಕ ಹಾಗೂ ಇನ್ನಿತರ ಪ್ರಮುಖರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಸುಜ್ಞಾನ ವಾಹಿನಿ ಪುರವಣಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತ್ರೆಗೆ ಆಗಮಿಸುತ್ತಿರುವ ಜನಸಮೂಹ
ಜಾತ್ರಾ ಮೆರವಣಿಗೆಯ ವೀಕ್ಷಣೆಗೆ ವಿವಿದೆಡೆಯಿಂದ ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಜಾತ್ರಾ ಪೇಟೆಯಲ್ಲಿ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳು ಆರಂಭವಾಗಿವೆ.
ಪಟ್ಟಣದ ಪ್ರಮುಖ ರಸ್ತೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ಮೆರವಣಿಗೆ ಸಾಗಿಬರುವ ಮಾರ್ಗದಲ್ಲಿ ರಂಗೋಲಿ ಬಿಡಿಸಲಾಗಿದೆ. ಪಟ್ಟಣದ ಎಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿ.ಸಿ.ಕ್ಯಾಮರಾ ಕಣ್ಗಾವಲು ಇದೆ.
ಬುಧವಾರ ಬೆಳಿಗ್ಗೆ ಬಾಂಬ್ ನಿಷ್ಕ್ರಿಯದಳದವರು ಪ್ರಮುಖ ರಸ್ತೆಗಳಲ್ಲಿ ತಪಾಸಣೆ ನಡೆಸಿದರು.
ಸಬಗೇರಿ ಕ್ರಾಸ್ ನಿಂದ ಸಂಭ್ರಮ ಕ್ರಾಸ್ ವರೆಗೆ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ಬಸ್ ನಿಲ್ದಾಣ ಮಾರ್ಗವಾಗಿ ಸಾಗುತ್ತಿವೆ. ಘನ ವಾಹನಗಳಿಗೆ ತಟಗಾರ ಕ್ರಾಸ್ ಮೂಲಕ ಸಾಗಲು ಅನುವು ಮಾಡಲಾಗಿದೆ.