ಯಲ್ಲಾಪುರ ತಾಲೂಕಿನ ಬೆಳಸೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಖ್ಯಾತ ಕಲಾವಿದರಿಂದ ಯಕ್ಷಗಾನಾಮೃತ ಕಾರ್ಯಕ್ರಮ ನಡೆಯಿತು. ಬೆಳಸೂರಿನ ರಾಘವೇಂದ್ರ ಭಟ್ಟ ಅವರ ಮನೆಯಲ್ಲಿ ನಡೆದ ಚೂಡಾಕರ್ಮ ಮಂಗಲ ಸಮಾರಂಭದ ಸಂದರ್ಭದಲ್ಲಿ ನಡೆದ ಯಕ್ಷಗಾನಾಮೃತ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.
ಭಾಗವತರಾಗಿ ರಾಘವೇಂದ್ರ ಮಯ್ಯ ಹಾಲಾಡಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಂತ ಹೆಗಡೆ ದಂತಳಿಗೆ ಹಾಗೂ ಮದ್ದಳೆ ವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ರಾಘವೇಂದ್ರ ಹೆಗಡೆ ತೂಕದಬೈಲು ಮತ್ತು ಚಂಡೆ ವಾದಕರಾಗಿ ಪ್ರಮೋದ ಹೆಗಡೆ ಕಬ್ಬಿನಗದ್ದೆ ಪಾಲ್ಗೊಂಡಿದ್ದರು.
ಪ್ರಮುಖರಾದ ಆರ್. ಎಸ್. ಭಟ್ಟ ಬೆಳಸೂರು, ಸುಬ್ರಹ್ಮಣ್ಯ ಭಟ್ಟ ಬೆಳಸೂರು, ರಾಮಚಂದ್ರ ಭಟ್ಟ ಹೊನ್ನಸೆಪಾಲ್, ಶಿವರಾಮ ಕೊಂಬೆ, ಸೀತಾರಾಮ ಗಾಂವ್ಕರ ಸಾಲೆಮಕ್ಕಿ, ಆರ್.ಜಿ.ಭಟ್ಟ ಬೆಳಸೂರು ಹಾಗೂ ನೂರಾರು ಕಲಾ ಪ್ರೇಕ್ಷಕರು ಯಕ್ಷಗಾನಾಮೃತವನ್ನು ವೀಕ್ಷಿಸಿದರು.
ವಿನಾಯಕ ಭಟ್ಟ ಶೇಡಿಮನೆ ಮಾತನಾಡಿ, ಮಾನವನ ಮನಸ್ಸು ಹತ್ತು ಹಲವು ಯೋಚನೆಗಳ- ಭಾವನೆಗಳ ಆಗರ-ಆಲಯ. ನಮ್ಮ ಆಲೋಚನೆಗಳು ಸಂಕಲ್ಪಗಳು, ನಮ್ಮ ಬದುಕಿನ ರೂಪರೇಷೆಗಳನ್ನು ನಿರ್ಧರಿಸುತ್ತದೆ. ಭಾವನೆ ಇದ್ದಂತೆ ಭವ ಕಂಡು ಬರುತ್ತದೆ. ಉತ್ತಮ ಆಂತರಿಕ ಭಾವನೆಗಳು, ಸಂಕಲ್ಪಗಳು, ಯೋಚನೆಗಳು, ಪರಿಶುದ್ಧ ಮನಸ್ಸು ಇವೆಲ್ಲ ಇದ್ದರೆ ಬಾಳು ಶಾಂತಿಯುತವಾಗಿರುತ್ತದೆ. ಇದರಿಂದ ಯಶಸ್ಸು ಕೀರ್ತಿ ಲಭಿಸುತ್ತದೆ. ಇದಕ್ಕೆ ಉತ್ತಮವಾದ ಉದಾಹರಣೆ ಎಂದರೆ ಯಕ್ಷಗಾನ ಕಲೆ. ಯಕ್ಷಗಾನ ಕಲೆಯು ಪರಂಪರೆಯಾಗಿದ್ದು ಹಾಗೂ ಶಾಸ್ತ್ರೀಯ ಕಲೆಯಾಗಿದೆ. ಇದಕ್ಕೆ ಉತ್ತಮವಾದ ಚಾರಿತ್ರ್ಯ ನಿರ್ಮಾಣ ಮಾಡುವ ಶಕ್ತಿ ಇದೆ. ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಯವರಿಗೆ ಕಲಿಸಿ ಕೊಡಬೇಕು ಎಂದರು.