ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಅಲ್ಪಸಂಖ್ಯಾತರ ಓಲೈಕೆ, ಗೋ ಹಂತಕರಿಗೆ ಪ್ರೋತ್ಸಾಹ ಮತ್ತು ಓಟ್ ಬ್ಯಾಂಕ್ ರಾಜಕಾರಣದಿಂದಾಗಿ ಹಾಗೂ ಅತಿಯಾದ ತುಷ್ಟೀಕರಣದಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ, ಮಾತ್ರವಲ್ಲ ಕಾಂಗ್ರೆಸ್ ನಲ್ಲಿರುವ ಹಿಂದೂಗಳಿಗೂ ಮುಂದೊಂದು ದಿನ ಇದು ದೊಡ್ಡ ಸಮಸ್ಯೆಯಾಗಲಿದೆ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಮುಸ್ಲಿಂ ಯುವಕನಿಂದ ಹತ್ಯೆಯಾದ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ರಂಜಿತಾ ಬನ್ಸೋಡೆ ಮನೆಗೆ ಗುರುವಾರ ಭೇಟಿನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದ ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳಿಂದ ಅಮಾಯಕರ ಕೊಲೆ ಮುಂತಾದ ಅಹಿತಕರ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ದೇಶದ್ರೋಹಿಗಳನ್ನು ಈ ಸರ್ಕಾರ ಬೆಳೆಸುತ್ತಿದೆ. ಓಟಿಗೋಸ್ಕರ ಮಾತ್ರ ಇವರಿಗೆ ದಲಿತರು ಬೇಕು, ದಲಿತರ ಸಂಕಷ್ಟಕ್ಕೆ ಇವರು ಸ್ಪಂದಸುವುದಿಲ್ಲ. ಮುಂದಿನ ದಿನಗಳಲ್ಲಿ ದಲಿತರು, ಹಿಂದುಳಿದವರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಬಾರದು ಎಂದ ಪ್ರಮೋದ ಮುತಾಲಿಕ್, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಹತ್ಯೆಯಾದ ರಂಜಿತಾ ಕುಟುಂಬದವರನ್ನು ಇನ್ನೂವರೆಗೂ ಭೇಟಿಯಾಗಿ ಸಾಂತ್ವನ ಹೇಳಿಲ್ಲ. ಸ್ಥಳಿಯ ಶಾಸಕರೂ ಸೇರಿದಂತೆ ಈ ಬಗ್ಗೆ ರಾಜಕೀಯದ ಮಾತನಾಡುತ್ತಾರೆಯೇ ಹೊರತೂ ಇವರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
ಇವರ ಬಗ್ಗೆ ಅನುಕಂಪ ಇದೆ ಎಂದಾದರೆ ಕೂಡಲೇ ರಾಜ್ಯ ಸರ್ಕಾರ ರಂಜಿತಾ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡಬೇಕು, ಈ ಕುಟುಂಬಕ್ಕೆ ಎರಡು ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಉತ್ತರ ಪ್ರಾಂತ್ಯ ಸಂಘಟನಾ ಗೌರವಾಧ್ಯಕ್ಷ ಸತ್ಯಪ್ರಮೋದ ತೀರ್ಥ ಸ್ವಾಮೀಜಿ, ಸಂಘಟನೆಯ ಪ್ರಮುಖರಾದ ಮಂಜುನಾಥ ಕೆ.ಎಚ್, ಬಾಬು ಬಾಂದೇಕರ್, ಮಹಾಲಿಂಗ ಐಗಳಿ, ಹರೀಶ ಪೂಜಾರಿ, ಕಿರಣ ಚೌಹಾಣ, ಕಾಟ್ಕರ್, ಸೋಮೇಶ್ವರ ನಾಯ್ಕ, ಶ್ರೀಪಾದ ಭಟ್ಟ, ಸಿದ್ಧಾರ್ಥ ಮುಂತಾದವರು ಇದ್ದರು.