ಯಲ್ಲಾಪುರತಾಲೂಕಿನ ಮಂಚಿಕೇರಿಯಲ್ಲಿ ಹಿಂದೂ ಸಮಾಜೋತ್ಸವವು ಅದ್ದೂರಿಯಾಗಿ ನಡೆಯಿತು. ಹಿಂದೂ ಸಮಾಜೋತ್ಸವ ಸಮಿತಿ ಮಂಚಿಕೇರಿ ಮಂಡಲ(ಕಂಪ್ಲಿ ಮತ್ತು ಹಾಸಣಗಿ ಪಂಚಾಯತ) ಇವರು ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವು ಮಂಚಿಕೇರಿಯ ಶ್ರೀಮಹಾಗಣಪತಿ ದೇವಸ್ಥಾನದ ಆವಾರದಿಂದ ಶೋಭಾಯಾತ್ರೆ ಮೂಲಕ ಪ್ರಾರಂಭವಾಯಿತು. ಮಂಗಳೂರಿನ ಚಂಡೆ ವಾದ್ಯ, ಸ್ಥಳಿಯ ದನಗರ ಗೌಳಿ ಸಮಾಜದ ಗಜ ನೃತ್ಯ ಹಾಗೂ ಮಹಾಗಣಪತಿ ಭಜನಾ ಮಂಡಳಿ ಹಾಸೆಕಲ್ ಅವರ ಭಜನಾ ತಂಡ ಶೋಭಾಯತ್ರೆಯಲ್ಲಿ ಪಾಲ್ಗೊಂಡಿದ್ದವು.
ಶ್ರೀರಾಜರಾಜೇಶ್ವರಿ ಕ್ರೀಡಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮಾತೆಯರಿಂದ ಭಗವದ್ಗಿತಾ ಪಠಣ, ಶಂಖನಾದ ಹಾಗೂ ವೇದಘೋಷದ ಮೂಲಕ ಕಾರ್ಯಕ್ರಮ ಆರಂಭವಾಯಿತು.
ಮುಖ್ಯ ವಕ್ತಾರರಾಗಿ ಆಗಮಿಸಿದ್ದ ವಾಗ್ಮಿ ಎನ್.ಆರ್.ದಾಮೋದರ ಶರ್ಮಾ ಮಾತನಾಡಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ನಾವೇ ಉಳಿಸಿಕೊಳ್ಳಬೇಕು ವಿನ: ಬೇರೆಯವರಲ್ಲ. ಮೊದಲು ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕು, ಹಿಂದೂ ಧರ್ಮದ ಆಚರಣೆ, ರಾಷ್ಟ್ರ ಪ್ರೇಮ, ಗುರುಹಿರಿಯರಿಗೆ ಗೌರವ ಸಮರ್ಪಣೆ ಕೇವಲ ಕಾರ್ಯಕ್ರಮಗಳಿಗೆ ಅಥವಾ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿ ದಿನ ಆಚರಣೆಯಲ್ಲಿರಬೇಕು ಎಂದರು.
ಸಭೆಯಲ್ಲಿ ಸಾನಿಧ್ಯ ವಹಿಸಿದ್ದ ಜಡೆಮಠದ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ನಮ್ಮ ಸನಾತನ ಪಠ್ಯದಂತೆ ಈಗಲೂ ಕೂಡ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಕೆಲಸ ಮಾಡಬೇಕು ಅಂದಾಗ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಬೆಳೆಯುತ್ತದೆ. ಮಹಾಪುರುಷರ ಬಾವಚಿತ್ರಗಳನ್ನು ತೋರಿಸಿ ಅವರಂತೆ ಆಗಿ ಎಂದೂ ಹೇಳುವುದಕ್ಕಿಂತ ಮಕ್ಕಳಿಗೆ ನೀನು ನನ್ನಂತೆ ಒಬ್ಬ ಉತ್ತಮ ವ್ಯಕ್ತಿಯಾಗು ಎಂದು ಯಾವತ್ತು ಹೇಳುತ್ತೆವೋ ಅಂದು ನಮ್ಮ ಹಿಂದೂ ಸಮಾಜ ಬದಲಾವಣೆಯಾಗುತ್ತದೆ ಎಂದು ಹೇಳಿದರು. ವೇದಿಕೆ ಮೇಲೆ ಗೋಪಾಲ ನಾಯ್ಕ ಕೊಕ್ಕಾರ ಉಪಸ್ಥಿತರಿದ್ದರು.
ಸಮಾಜೋತ್ಸವ ಸಮೀತಿಯ ಅಧ್ಯಕ್ಷ ರಾಘವೇಂದ್ರ ಭಟ್ಟ ಹಾಸಣಗಿ ಸ್ವಾಗತಿಸಿದರು. ಶಿವಪ್ರಸಾದ ಭಟ್ಟ ನಿರ್ವಹಿಸಿದರು. ಭಾಸ್ಕರ ಸಿದ್ದಿ ವಂದಿಸಿದರು.