ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಹಕರಿಸಿ: ಕ್ಷೇತ್ರ ಮತದಾರರ ನೋಂದಣಾಧಿಕಾರಿ
ಜೂ.20ರಿಂದ ಅ.7ರವರೆಗೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಸಾರ್ವಜನಿಕರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಕೆ.ಎಚ್.ಪಾಂಡು ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ಜು.29ರಿಂದ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ನಡೆಯಲಿದೆ. ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ.
ಆ.5ರಿಂದ ಸೆ.4ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು, ಅನರ್ಹರ ಸೇರ್ಪಡೆ ಆಗಬಾರದು, ಜೂ.30ರಿಂದ ಜು.29 ರವರೆಗೆ ಮತಗಟ್ಟೆ ಅಧಿಕಾರಿಯು ಮನೆ,ಮನೆಗೆ ಭೇಟಿ ನೀಡಲಿದ್ದಾರೆ, ಅವರು ತಲಾ ಎರಡು ಗಣತಿ ನಮೂನೆ ಪಾರಂಗಳನ್ನು ನೀಡುತ್ತಾರೆ. ಎರಡೂ ಪಾರಂ ಭರ್ತಿ ಮಾಡಿ, ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ನೀಡಿ, ಇನ್ನೊಂದನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು ಎಂದರು.
ಯಲ್ಲಾಪುರ ಕ್ಷೇತ್ರದಲ್ಲಿ ಒಟ್ಟೂ 1,89,502 ಮತದಾರರಿದ್ದಾರೆ. ಯಲ್ಲಾಪುರ ತಾಲೂಕಿನಲ್ಲಿ 68484 ಮತದಾರರು, ಮುಂಡಗೋಡದಲ್ಲಿ 78411 ಮತದಾರರು, ಬನವಾಸಿಯಲ್ಲಿ 42607 ಮತದಾರರು ಇದ್ದಾರೆ. ಈಗಾಗಲೇ ಶೇ.92.85, ಮುಂಡಗೋಡದಲ್ಲಿ ಶೇ.93.75, ಬನವಾಸಿಯಲ್ಲಿ ಶೇ.95.20 ರಷ್ಟು ಮ್ಯಾಪಿಂಗ್ ಮಾಡಲಾಗಿದೆ ಎಂದು ಅವರು ವಿವರ ನೀಡಿದರು. ಈ ಸಂದರ್ಭದಲ್ಲಿ ತಹಶಿಲ್ದಾರ ಎಂ.ಆರ್.ಕುಲಕರ್ಣಿ, ತಾಲೂಕಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ ಇದ್ದರು.