ವಕೀಲ ಅಜೀತ ನಾಯ್ಕ ಕೊಲೆ ಆರೋಪಿ ಪಾಂಡುರಂಗ ಅಲಿಯಾಸ ದೀಪಕ ಅಲಿಯಾಸ ದೀಪ್ಯಾ ಮಾರುತಿ ಕಾಂಬಳೆ ಈತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.25 ಸಾವಿರ ದಂಡ ಹಾಗೂ ಮೃತನ ಅವಲಂಬಿತರಿಗೆ ರೂ.50 ಸಾವಿರ ಪರಿಹಾರ ನೀಡಬೇಕು ಹಾಗೂ ಮೃತನ ಅವಲಂಬಿತರು ಜಿಲ್ಲಾ ಉಚಿತ ಕಾನೂನು ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದೆಂದು ಶಿಕ್ಷೆ ವಿಧಿಸಿ ಶಿರಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ಶಿರಸಿಯ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನಲೆ
ದಾಂಡೇಲಿ ನಗರದ ಸಂಡೇ ಮಾಕೇಟ್ ಹತ್ತಿರದ ಶ್ರೀ ಅಯ್ಯಂಗಾರ ಬೇಕರಿ ಎದುರಿಗೆ ಪಟೇಲ್ ಸರ್ಕಲ್ ಕಡೆಯಿಂದ ದಾಂಡೇಲಿ ಬಸ್ ನಿಲ್ದಾಣದ ಕಡೆಗೆ ಹಾಯ್ದಿರುವ ದ್ವಿ ಮುಖವಾಗಿ ಇರುವ ಜೆ.ಎನ್. ರಸ್ತೆಯ ಪಶ್ಚಿಮ ಬದಿಯ ಪುಟಪಾತ್ ಮೇಲೆ ದಿ:27-07-2018 ರಂದು ರಾತ್ರಿ 9.15 ರ ಸುಮಾರಿಗೆ ಪಿರ್ಯಾದಿ ರಮೇಶ ವಾಸುದೇವ ನಾಯ್ಕ ಮತ್ತು ಸಾಕ್ಷಿದಾರ ಹನುಮಂತ ಬಾಳಪ್ಪ ಕುಂಬಾರ ಇವರು ಮೃತ ಅಜೀತ ನಾಯ್ಕ ತನ್ನ ಕಚೇರಿಯಿಂದ ಹೊರ ಬಂದು ಆತನ ಕಾರಿನ ಪಕ್ಕದ ಪುಟ್ ಪಾತ್ ಮೇಲೆ ನಿಂತಾಗ
ಆಪಾದಿತರಾದ ವಿನಾಯಕ ಅಲಿಯಾಸ ವಿನು ಅಲಿಯಾಸ ಅಪ್ಯಾ ಕೆಂಪಣ್ಣ ಕರ್ನಿಂಗ್, ಜಿ.ಎಲ್ ಮಂಜುನಾಥ ಅಲಿಯಾಸ ವಿಕ್ರಮ ಅಲಿಯಾಸ ವಿಕ್ಕಿ ಅಲಿಯಾಸ ಸಂಜು ಗುರುಸಿದ್ದಪ್ಪ ಅಲಿಯಾಸ ಸಿದ್ದರಾಜು, ನಾಜೀರ ಅಹ್ಮದ ಸಾಲುಸಾಬ ಜಮಾಲಿ, ಈಶ್ವರ ಅಲಿಯಾಸ ಈಶಾ ರಾಜೇಂದ್ರ ಶೆಟ್ಟಿಯಾರ ಇವರು ಕೊಲೆ ಒಳಸಂಚು ರೂಪಿಸದಂತೆ 1ನೇ ಆಪಾದಿತ ಪಾಂಡುರಂಗ ಅಲಿಯಾಸ ದೀಪಕ ಅಲಿಯಾಸ ದೀಪ್ಯಾ ಮಾರುತಿ ಕಾಂಬಳೆ ಅಲಿಯಾಸ ಹರಿಜನ ಇತನು ಒಮ್ಮೇಲೆ ಅಜೀತ ನಾಯ್ಕ ಇವರ ಕುತ್ತಿಗೆ ಮೇಲೆ ಕತ್ತಿಯಂದ ಬೀಸಿ ಹೊಡೆದು ಕೆಳಗೆ ಬಿದ್ದಾಗ ತಡೆಯಲು ಹೋದ ಪಿರ್ಯಾದಿಗೆ
ಅದೇ ಕತ್ತಿಯಿಂದ ಹೆದರಿಸಿ ಪುನಃ ಅಜೀತ ನಾಯ್ಕ ಇವರ ತಲೆಯ ಮತ್ತು ಕುತ್ತಿಗೆ ಮೇಲೆ ಕತ್ತಿಯಿಂದ ಹೊಡೆದು ತೀವ್ರ ಸ್ವರೂಪದ ರಕ್ತ ಗಾಯಗೊಳಿಸಿ ಕೊಲೆ ಮಾಡಿ, ಕೃತ್ಯಕ್ಕೆ ಬಳಸಿದ ಕತ್ತಿ ಮತ್ತು ನೀಲಿ ಬಣ್ಣದ ಜರ್ಕೀನ್ ನ್ನು ಸಂಡೇ ಮಾರ್ಕೆಟ್ ಪೂರ್ವ ಬದಿಯಲ್ಲಿಯ ಮಶೀದಿ ಹತ್ತಿರ ಹಾಳು ಬಿದ್ದ ಕಾರು ಅಡಿಯಲ್ಲಿ ಬಚ್ಚಿಟ್ಟು, ಪಿಶ್ ಮಾರ್ಕೆಟ್ ಹತ್ತಿರ ನಿಲ್ಲಿಸಿಟ್ಟ ಆತನ ಮೋಟಾರ್ ಸೈಕಲ್ ಮೇಲೆ ಪರಾರಿಯಾಗಿದ್ದ ಬಗ್ಗೆ ಆರೋಪಿತ ವಿರುದ್ಧ ದೇಷಾರೋಪಣೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿ ವಿಚಾರಣೆ ನಡೆಸಲಾಗಿತ್ತು.
ದಾಂಡೇಲಿ ವೃತ್ತದ ಅಂದಿನ ತನಿಖಾಧಿಕಾರಿಯಾದ ಪೊಲೀಸ್ ವೃತ್ತ ನಿರೀಕ್ಷಕ ಎ.ಎ.ಮುಜಾವರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೇಷಾರೋಪಣೆ ಪತ್ರ ಸಲ್ಲಿಸಿದ್ದರು ಹಾಗೂ ದಾಂಡೇಲಿ ನಗರ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮಂಜು ಶೆಟ್ಟಿ ಮತ್ತು ಗ್ರಾಮೀಣ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಹೇಶ ಗಾವಡೆ ಇವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಕ್ಷಿದಾರರನ್ನು ಸಮಯೋಜಿತ ಪ್ರಕರಣದಲ್ಲಿ ಹಾಜರು ಪಡಿಸಿ ಆರೋಪತನಿಗೆ ಶಿಕ್ಷೆ ಗುರಿಪಡಿಸುವಲ್ಲಿ ಸಹಕರಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸದೀರ್ಘ ವಾದ ಮಂಡಿಸಿದ್ದರು.