ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಜಿಲ್ಲಾ ಕಾರಾಗೃಹ ಹಾಗೂ ತೋಟಗಾರಿಕಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಾರವಾರ ಜಿಲ್ಲಾ ಕಾರಾಗೃಹ ಬಂದಿಗಳಿಗೆ ಸರ್ಕಾರದಿಂದ ದೊರೆಯುವ ಇಲಾಖಾವಾರು ಸೌಲಭ್ಯಗಳನ್ನು ಕುರಿತ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಗಾರವನ್ನು ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ. ಬಿ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಹೇಮಾವತಿ.ಬಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಿಕ ಪ್ರವೀಣ ಕುಮಾರ ಬಸ್ರೂರು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸುನೀಲ ಅಂಕೋಲೆಕರ ಮತ್ತಿತರರು ಉಪಸ್ಥಿತರಿದ್ದರು.
ಕಾರಾಗೃಹದಲ್ಲಿರುವ ಬಂದಿಗಳೆಲ್ಲರೂ ಬಿಡುಗಡೆ ಹೊಂದಿದ ನಂತರ ಯಾವುದೇ ಅನ್ಯಮಾರ್ಗ ತುಳಿಯದೇ ಸ್ವತಂತ್ರವಾಗಿ ಅವರವರ ಬದುಕು ಕಟ್ಟಿಕೊಳ್ಳಬೇಕೆಂಬುದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಹಾಗೂ ಸರ್ಕಾರದ ಉದ್ದೇಶವಾಗಿದ್ದು, ಇಲಾಖಾವಾರು ಸಮನ್ವಯದೊಂದಿಗೆ ಸರಕಾರದಿಂದ ದೊರೆಯುವ ಇಲಾಖಾವಾರು ಸೌಲಭ್ಯಗಳನ್ನು ಬಂಧಿ ನಿವಾಸಿಗಳಿಗೆ ಕಾರ್ಯಗಾರದ ಮೂಲಕ ತಿಳಿಸಲಾಯಿತು. ಬಂದಿ ನಿವಾಸಿಗಳೆಲ್ಲರೂ ಕಾರಾಗೃಹದಲ್ಲಿ ಪಡೆದಂತಹ ಇಲಾಖಾವಾರು ಮಾಹಿತಿಯನ್ನು ಹಾಗೂ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳವಂತಾಗಬೇಕು ಎಂಬುವುದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಆಶಯವಾಗಿದೆ.